ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಶವಯಾತ್ರೆ ಮೂಲಕ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಯಿತು.

ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಪ್ರಧಾನ ಸಂಚಾಲಕ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಚಟ್ಟದಲ್ಲಿ ಶವದಂತೆ ಮಲಗಿ ಹೂವಿನ ಹಾರವನ್ನ ಹಾಕಿ ಅಣುಕು ಶವಯಾತ್ರೆ ಮೂಲಕ ಮೆರವಣಿಗೆ ನಡೆಸಿ ಪ್ರತಿಭಟನೆ ಮಾಡಿದರು. ಇಂದ್ರಾಳಿ ರೈಲ್ವೆ ಬಳಿ ಇರುವ ಆಂಗ್ಲ ಮಾಧ್ಯಮ ಶಾಲೆಯ ಮುಂಭಾಗದಿಂದ ಶವಯಾತ್ರೆ ಆರಂಭಗೊಂಡು, ಸೇತುವೆಯ ಮಧ್ಯ ಭಾಗದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಭಾಗಿಯಾಗುವ ಮೂಲಕ ಸೇತುವೆಯ ಕಾಮಗಾರಿ ವಿಳಂಬ ನೀತಿಗೆ ವಿರೋಧ ವ್ಯಕ್ತಪಡಿಸಿದ್ದರು.

ಈ ಸಂದರ್ಭ ಪ್ರಮುಖರಾದ ಹರೀಶ್ ಪೂಜಾರಿ, ಸಂದೀಪ್ ಕಲ್ಮಾಡಿ, ಗಣೇಶ್ ರಾಜ ಸರಳೆಬೆಟ್ಟು, ವಿನಯ ಚಂದ್ರ ಸಾಸ್ತಾನ, ಮತ್ತಿತರರು ಉಪಸ್ಥಿತರಿದ್ದರು.

ಕಾಮಗಾರಿ ಆರಂಭಿಸಿ ಹಲವು ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಇದರ ಗುತ್ತಿಗೆದಾರರನ್ನು ಕೇಳುವವರೇ ಇಲ್ಲವಾಗಿದೆ. ಹಲವು ಸಾವು ನೋವುಗಳಿಗೆ ಕಾರಣವಾಗುತ್ತಿರುವ ಇಂದ್ರಾಳಿ ರೈಲ್ವೆ ಸೇತುವೆಯ ಕಾಮಗಾರಿ ವಿಳಂಬ ನೀತಿಯಿಂದಾಗಿ ಜನರು ರೋಸಿಹೋಗಿದ್ದು ಕಾಮಗಾರಿ ಆರಂಭವಾಗಿ ಹಲವು ವರ್ಷಗಳು ಕಳೆದರೂ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಜನರ ಸಮಸ್ಯೆಯನ್ನ ಕೇಳುವವರು ಯಾರು ಇಲ್ಲವಾಗಿದ್ದಾರೆ ಹೀಗಾಗಿ ಈ ರೀತಿಯ ಪ್ರತಿಭಟನೆಯನ್ನು ನಾವು ಹಮ್ಮಿಕೊಂಡಿದ್ದೆವೇ. ಈ ಮೂಲಕ ವ್ಯವಸ್ಥೆ ಸಂಪೂರ್ಣವಾಗಿ ಸತ್ತು ಹೋಗಿದೆ. ಇಲ್ಲಿನ ಶಾಲೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಜೀವ ಕೈಯಲ್ಲಿಟ್ಟು ಓಡಾಡುವಂತಾಗಿದೆ. ಆದುದರಿಂದ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಸಂಚಾರಕ್ಕೆ ಯೋಗ್ಯ ಮಾಡಬೇಕು
ನಿತ್ಯಾನಂದ ಒಳಕಾಡು