ಉಡುಪಿ : ಅಯೋಧ್ಯೆ ಶ್ರೀರಾಮ ಮಂದಿರದ ಮೊದಲ ಮಹಡಿಯಲ್ಲಿ ನಿರ್ಮಿತವಾಗಿರುವ ಶ್ರೀರಾಮ ದರ್ಭಾರಿನ ಶ್ರೀರಾಮ ಪಟ್ಟಾಭಿಷೇಕ ವಿಗ್ರಹಗಳಾದ ಶ್ರೀರಾಮ–ಸೀತೆ–ಲಕ್ಷ್ಮಣ–ಭರತ–ಶತ್ರುಘ್ನ ಹಾಗೂ ಶ್ರೀ ಆಂಜನೇಯರಿಗೆ ಉಡುಪಿಯಿಂದ ವಿಶೇಷ ಸ್ವರ್ಣಾಭರಣಗಳನ್ನು ತಯಾರಿಸಿ ಅರ್ಪಿಸಲಾಗಿದೆ.

ಮಂದಿರದ ಟ್ರಸ್ಟ್ನ ಮನವಿಯ ಮೇರೆಗೆ, ಉಡುಪಿಯ ಪ್ರಸಿದ್ಧ ಸ್ವರ್ಣ ಜ್ಯುವೆಲ್ಲರ್ಸ್ ಸಂಸ್ಥೆಯವರು ಕೇವಲ ಹತ್ತು ದಿನಗಳಲ್ಲಿ ಎಲ್ಲಾ ಆಭರಣ ತಯಾರಿಯನ್ನು ಪೂರ್ಣಗೊಳಿಸಿದ್ದಾರೆ. ಸೋಮವಾರ ಸಂಸ್ಥೆಯ ಗುಜ್ಜಾಡಿ ದೀಪಕ್ ನಾಯಕ್ ಮತ್ತು ತಂಡ ಅಯೋಧ್ಯೆಗೆ ತೆರಳಿ, ಶಿಲಾ ವಿಗ್ರಹಗಳಿಗೆ ಸ್ವರ್ಣಾಭರಣಗಳನ್ನು ಶ್ರದ್ಧೆಯಿಂದ ತೊಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಗುಜ್ಜಾಡಿ ರಾಮದಾಸ ನಾಯಕ್ ಅವರು ಮಾತನಾಡಿ, ಇದು ನಮ್ಮ ಸ್ವರ್ಣ ಕುಟುಂಬಕ್ಕೆ ಅಪೂರ್ವ ಹಾಗೂ ಶಾಶ್ವತ ಸ್ಮರಣೀಯ ಅವಕಾಶ. ಗುರುಹಿರಿಯರ ಪುಣ್ಯದ ಪರಿಣಾಮವಾಗಿ ಈ ಪವಿತ್ರ ಸೇವೆ ಸಲ್ಲಿಸಲು ಸಾಧ್ಯವಾಯಿತು. ಅಯೋಧ್ಯೆ ಮಂದಿರದ ನಿರ್ಮಾಣ ಪೂರ್ಣಗೊಳ್ಳುತ್ತಿರುವ ಮತ್ತು ಪ್ರಧಾನಿ ಅವರಿಂದ ಧ್ವಜಾರೋಹಣ ನಡೆಯಲಿರುವ ಘಟ್ಟದಲ್ಲಿ ಈ ಕಾರ್ಯ ಸಿಕ್ಕಿರುವುದು ನಮ್ಮಿಗೆ ದೊಡ್ಡ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.

ಈ ಹಿಂದೆ ಕಾಶಿ ಮಠಾಧೀಶರ ಆಜ್ಞೆಯಂತೆ, ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಬೆಳ್ಳಿ ಪಲ್ಲಕ್ಕಿ, ಸ್ವರ್ಣ ಅಟ್ಟೆ, ಪ್ರಭಾವಳಿ, ಕಂಠೀಹಾರ ಮೊದಲಾದ ಅನೇಕ ದೇವತಾ ಸೇವಾ ವಸ್ತುಗಳನ್ನು ತಯಾರಿಸಿದ ಅನುಭವವನ್ನು ಅವರು ಸ್ಮರಿಸಿದರು. ಈ ಬಾರಿ ಪಟ್ಟಾಭಿಷೇಕದ ಎಲ್ಲ ವಿಗ್ರಹಗಳಿಗೆ ಕಾಲಿನ ನೂಪುರದಿಂದ ಹಿಡಿದು ಕಂಠೀಹಾರ, ಕಿರೀಟ, ಕರ್ಣಕುಂಡಲ ಸೇರಿದಂತೆ ತಲೆಯಿಂದ ಕಾಲಿನವರೆಗಿನ ಸಂಪೂರ್ಣ ಸ್ವರ್ಣಾಭರಣ ಸಂಗ್ರಹವನ್ನು ತಯಾರಿಸಿ ಅರ್ಪಿಸಲಾಗಿದೆ ಎಂದು ತಿಳಿಸಲಾಗಿದೆ.



