ಬೀದರ್:
ಬೇಸಗೆ ಆರಂಭಕ್ಕೂ ಮುನ್ನವೇ ರಾಜ್ಯದ ವಿವಿಧ ಕಡೆಗಳಲ್ಲಿ ನೀರಿನ ಅಭಾವ ಕಂಡು ಬಂದಿದೆ. ಬೀದರ್ನ ಕೆಲವು ತಾಂಡಾದಲ್ಲಿ ಈಗಾಗಲೇ ನೀರಿಗಾಗಿ ಹಾಹಾಕಾರ ಎದ್ದಿದೆ . ಕೊಡ ಹಿಡಿದು ನಳ್ಳಿಯ ಮುಂದೆ ಜನರು ಕ್ಯೂ ನಿಂತಿರುವುದು ಕಂಡು ಬಂದಿದ್ದು, ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಂಬಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಜಂಬಿಗಿ ತಾಂಡಾ, ಗಾನಾ ತಾಂಡಾದಲ್ಲಿ ಈ ಸಮಸ್ಯೆ ಮೀತಿಮೀರಿದೆ.
ವಿದ್ಯಾರ್ಥಿಗಳು ಶಾಲೆ ತೊರೆದು ಕಿ.ಮೀ.ಗಟ್ಟಲೆ ದೂರ ಹೋಗಿ ನೀರು ತರುವ ಸ್ಥಿತಿ ನಿರ್ಮಾಣವಾಗಿದೆ. ಈಗಲೇ ಹೀಗಾದರೆ ಬೇಸಗೆಯಲ್ಲಿ ಹೇಗೆ ಎಂದು ತಾಂಡಾ ನಿವಾಸಿಗಳು ಪ್ರಶ್ನಿಸಿದ್ದಾರೆ. ತಾಂಡಾಗಳಿಗೆ ಕುಡಿಯುವ ನೀರು ಪೂರೈಸಿ ಎಂದು ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.