ಬೆಂಗಳೂರು:
ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಶೇ.15 ರಷ್ಟು ಏರಿಕೆಗೆ ಹಿಂದಿನ ಬಿಜೆಪಿ ಕಾರಣವಾಗಿದೆ. ಹಿಂದಿನ ಸರ್ಕಾರ ನಮ್ಮ ಮೇಲೆ ರೂ. 5,900 ಕೋಟಿ ಸಾಲವನ್ನು ಬಿಟ್ಟು ಹೋಗಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.
ದೈನಂದಿನ ನಿರ್ವಹಣಾ ವೆಚ್ಚ ಮತ್ತು ವೇತನ ಹೆಚ್ಚಾಗಿರುವುದರಿಂದ ದರ ಏರಿಕೆ ಅಗತ್ಯವಾಗಿದೆ. ಪ್ರತಿದಿನ ಡೀಸೆಲ್ ದರ ರೂ. 9 ಕೋಟಿಯಿಂದ ರೂ. 13 ಕೋಟಿಯಾಗುತ್ತದೆ. ಅದೇ ರೀತಿ ವೇತನ ರೂ. 12 ಕೋಟಿಯಿಂದ 18 ಕೋಟಿಯಾಗುತ್ತದೆ. ಪ್ರತಿದಿನ ಸಾರಿಗೆ ನಿಗಮಗಳಿಗೆ ರೂ. 10 ಕೋಟಿಗೂ ಹೆಚ್ಚು ಹೊರೆಯಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ 2020ರಲ್ಲಿ ರೂ. 60 ಇದ್ದ ಡೀಸೆಲ್ ದರವನ್ನು ಈಗ 90 ರೂಪಾಯಿಗೆ ಹೆಚ್ಚಿಸಿದೆ. ಡೀಸೆಲ್ ದರವನ್ನು ಕಡಿಮೆ ಮಾಡಿ ನಂತರ ಬಿಜೆಪಿಯವರು ಟಿಕೆಟ್ ದರ ಏರಿಕೆ ಬಗ್ಗೆ ಮಾತನಾಡಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ. ಬಿಜೆಪಿ ಸರ್ಕಾರ ಅಷ್ಟು ಮೊತ್ತದ ಸಾಲ ಮಾಡದಿದ್ದರೆ ಕಾಂಗ್ರೆಸ್ ದರ ಏರಿಕೆಗೆ ಹೋಗುತ್ತಿರಲಿಲ್ಲ. 2020 ಜನವರಿಯಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಟಿಕೆಟ್ ದರವನ್ನು ಶೇ. 12 ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ಬಿಜೆಪಿಯವರಿಗೆ ದರ ಏರಿಕೆ ಪ್ರಶ್ನಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದರು.
ದೈನಂದಿನ ಬಸ್ಗಳ ನಿರ್ವಹಣೆ ಮತ್ತು ಸಂಬಳದ ವೆಚ್ಚಕ್ಕೆ ಹೋಲಿಸಿದರೆ ಟಿಕೆಟ್ಗಳ ಮಾರಾಟದಿಂದ ಬರುವ ಆದಾಯ ಕಡಿಮೆಯಾಗಿದೆ ಹೀಗಾಗಿ ದರ ಹೆಚ್ಚಳ ಅಗತ್ಯವಾಗಿದೆ. ಶಕ್ತಿ ಯೋಜನೆಗೆ ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರದಿಂದ ಹಣ ನೀಡುತ್ತಿದ್ದು, ಅದಕ್ಕೂ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ. ದರ ಪರಿಷ್ಕರಿಸುವಂತೆ ಸಾರಿಗೆ ನಿಗಮಗಳ ನೌಕರರ ಬೇಡಿಕೆ ಕೂಡಾ ಆಗಿತ್ತು. ದರ ಏರಿಕೆ ಬಗ್ಗೆ ಪುರುಷ ಪ್ರಯಾಣಿಕರ ಕೋಪ ಸಹಜ ಆದರೆ, ಬಿಜೆಪಿಗೆ ಯಾವುದೇ ನೈತಿಕ ಹಕ್ಕುಗಳಿಲ್ಲ ಎಂದು ಟೀಕಿಸಿದರು.
ಬಿಜೆಪಿ ಮಹಿಳೆಯರಿಗೆ ನೀಡುವ ಯೋಜನೆಗಳ ವಿರುದ್ಧವಾಗಿದೆ. ಅವರು ಏನು ಮಾಡಿದರೂ ಮತ್ತು ಸರ್ಕಾರದ ವಿರುದ್ಧ ಎಷ್ಟು ಪ್ರಚಾರ ಮಾಡಿದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಮತ್ತು ಬಿಜೆಪಿಯ ಅಂತರವು ಮತ್ತಷ್ಟು ಕಡಿಮೆಯಾಗಲಿದೆ. ಪ್ರಯಾಣ ದರ ಹೆಚ್ಚಳ ಮಾಡಬೇಕೆಂದು ರಾಜ್ಯದ ನಾಲ್ಕು ನಿಗಮಗಳ ಆರು ತಿಂಗಳ ಹಿಂದೆಯೇ ಬೇಡಿಕೆ ಸಲ್ಲಿಸಿದ್ದವು, ಅದನ್ನು ಈಗ ಪರಿಗಣಿಸಲಾಗಿದೆ ಎಂದು ಸಚಿವರು ತಿಳಿಸಿದರು.