ಬೆಂಗಳೂರು :
ಭ್ರಷ್ಟಾಚಾರ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಈ ನಿಟ್ಟಿನಲ್ಲಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಒಂದಷ್ಟು ಜಾಗೃತಿಯನ್ನು ಸಹ ಮೂಡಿಸಲಾಗಿದೆ. ಹೀಗಿದ್ರೂ ಕೂಡಾ ಭ್ರಷ್ಟಾಚಾರಕ್ಕೆ ಮಾತ್ರ ಕೊನೆಯೇ ಇಲ್ಲದಂತಾಗಿದೆ. ಅದೆಷ್ಟೋ ಕಡೆ ಇಂದಿಗೂ ಜನರು ತಮ್ಮ ಕೆಲಸ ಆಗ್ಬೇಕು ಅಂದ್ರೆ ಅಧಿಕಾರಿಗಳಿಗೆ ಲಂಚ ಕೊಡ್ಬೇಕಾದ ಪರಿಸ್ಥಿತಿ ಇದೆ. ಇಲ್ಲೊಂದು ಕಡೆ ಇಂತಹದ್ದೇ ಘಟನೆ ನಡೆದಿದ್ದು, ಅಧಿಕಾರಿಯ ಲಂಚದಾಹಕ್ಕೆ ಬೇಸತ್ತು ಹೋದ ಜನ ಕೊನೆಗೆ ಆ ಅಧಿಕಾರಿ ಮೇಲೆ ನೋಟನ್ನು ಎಸೆದು ಪ್ರತಿಭಟನೆ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಗುಜರಾತ್ನ ಧೋಲ್ಕಾ ಪ್ರದೇಶದಲ್ಲಿ ನಡೆದ ಘಟನೆ ಇದಾಗಿದ್ದು, ನೋಟನ್ನು ಎಸೆಯುವ ಮೂಲಕ ಭ್ರಷ್ಟ ಅಧಿಕಾರಿಯ ವಿರುದ್ಧ ಜನ ಪ್ರತಿಭಟನೆಯನ್ನು ಮಾಡಿದ್ದಾರೆ. ಹೌದು ಸರ್ಕಾರಿ ಕಚೇರಿಯ ಒಳಗೆ ನುಗ್ಗಿ ಕುರ್ಚಿಯ ಮೇಲೆ ಕುಳಿದಿದ್ದಂತಹ ಭ್ರಷ್ಟ ಅಧಿಕಾರಿಯ ಕುತ್ತಿಗೆಗೆ ಭಿತ್ತಿ ಪತ್ರವನ್ನು ನೇತು ಹಾಕಿ ನೋಟನ್ನು ಎಸೆದು ತಗೊಳ್ಳಿ ಇದನ್ನೂ ತಿನ್ನಿ, ಎಂದು ಹೇಳುವ ಮೂಲಕ ಕೋಪ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಜನವರಿ 9, 2025 ರಂದು ನಡೆದಿದ್ದು, ಮತ್ತು ಪ್ರತಿಭಟನೆಯಲ್ಲಿ ಜನ ಅಸಲಿ ನೋಟುಗಳನ್ನು ಎಸೆದದ್ದಲ್ಲ ಎಂಬ ಮಾಹಿತಿ ಸಿಕ್ಕಿದೆ.kalamkeechot ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ತೆಗೆದುಕೊಳ್ಳಿ, ಅಕ್ರಮವಾಗಿ ಸಂಪಾದಿಸಿದ ಹಣವನ್ನು ಎಷ್ಟು ತಿನ್ನುತ್ತೀರಿ? ಎಂದು ಜೋರು ಮಾಡಿ ನೋಟುಗಳನ್ನು ಭ್ರಷ್ಟ ಅಧಿಕಾರಿ ಮುಖಕ್ಕೆ ಎಸೆಯುವ ಮೂಲಕ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಜನವರಿ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.9 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈಗಂತೂ ಭ್ರಷ್ಟಾಚಾರ ಎಂಬ ಕ್ಯಾನ್ಸರ್ ಮಹಾಮಾರಿಯಂತೆ ಎಲ್ಲೆಡೆ ಹರಡಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೊದಲು ಇಂತಹ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹವರನ್ನು ಕೆಲಸದಿಂದ ವಜಾಗೊಳಿಸದಿದ್ದರೆ, ಭ್ರಷ್ಟಚಾರಕ್ಕೆ ಕೊನೆಯೇ ಇರುವುದಿಲ್ಲʼ ಎಂದು ಹೇಳಿದ್ದಾರೆ.


