ಉಡುಪಿ : ಅಡಿಕೆ ಮರದ ತಲೆ ಕತ್ತರಿಸುವ ವೇಳೆ ಸುಮಾರು 20 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಬಳಿಕ ಮೃತಪಟ್ಟ ಘಟನೆ ಉಳ್ತೂರು ಗ್ರಾಮದ ಹಲ್ತೂರಿನಲ್ಲಿ ನಡೆದಿದೆ. ಉಳ್ತೂರು ಗ್ರಾಮದ ಭುಜಂಗ ಶೆಟ್ಟಿ (56) ಅವರು ಆ.8ರಂದು ಮನೆಯ ಜಾಗದಲ್ಲಿದ್ದ ಅಡಿಕೆ ಮರ ಹತ್ತಿ, ಮರದ ತಲೆಯನ್ನು ಕತ್ತರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಸುಮಾರು 20 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದರು. ಪರಿಣಾಮ ತಲೆ ಹಾಗೂ ಬೆನ್ನಿಗೆ ತೀವ್ರ ಒಳನೋವು ಉಂಟಾಗಿತ್ತು.

ಗಾಯಗೊಂಡ ಭುಜಂಗ ಶೆಟ್ಟಿ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದ ಬಳಿಕ ಆ.20ರಂದು ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಗೊಂಡ ಅವರನ್ನು ಹಲ್ತೂರಿನ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಮನೆಯಲ್ಲಿದ್ದ ವೇಳೆ ಸಂಜೆ ಸುಮಾರು 5.45ರ ಸುಮಾರಿಗೆ ಭುಜಂಗ ಶೆಟ್ಟಿ ಮೃತಪಟ್ಟಿದ್ದಾರೆ. ಅಡಿಕೆ ಮರದಿಂದ ಬಿದ್ದು ಉಂಟಾದ ಗಾಯಗಳ ಪರಿಣಾಮ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


