ಉಡುಪಿ : ಮಾನಸಿಕ ಅಸ್ವಸ್ಥನೊಬ್ಬ ನಾಗರಿಕ ಸಮಿತಿಯ ಉಚಿತ ಸೇವಾ ವಾಹನದ ಹಿಂಬದಿ ಬಾಗಿಲಿನ ಗಾಜನ್ನು ಪುಡಿಗೈದು, ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ಆದಿಉಡುಪಿ–ಪಂದುಬೆಟ್ಟು ಪರಿಸರದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಮನೆಗಳಿಗೆ ನುಗ್ಗುವುದು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಭೀತಿಗೊಳಗಾಗಿದ್ದರು. ಈ ಕುರಿತು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಲಾಗಿತ್ತು.

ಮಾಹಿತಿ ಪಡೆದ ಒಳಕಾಡು ಅವರು ಸ್ಥಳಕ್ಕೆ ತೆರಳಿ, ವ್ಯಕ್ತಿಯನ್ನು ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸಲು ನಾಗರಿಕ ಸಮಿತಿಯ ಉಚಿತ ಸೇವಾ ವಾಹನದಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಏಕಾಏಕಿ ಆಕ್ರೋಶಗೊಂಡ ವ್ಯಕ್ತಿ ವಾಹನದ ಹಿಂಬದಿ ಬಾಗಿಲಿನ ಗಾಜನ್ನು ಪುಡಿಗೈದಿದ್ದಾನೆ. ಬಳಿಕ ವಾಹನದಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದಲ್ಲದೆ, ಒಳಕಾಡು ಹಾಗೂ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ.

ಪರಿಸ್ಥಿತಿಯ ನಡುವೆಯೂ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆತನನ್ನು ಮತ್ತೆ ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ 112 ತುರ್ತು ಸಹಾಯವಾಣಿ ಪೊಲೀಸರು ನೆರವು ನೀಡಿದರು.


