ಉಡುಪಿ: ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿಯ ಬಿಲ್ಲು ಸಂಗ್ರಹಕ ಮಂಜುನಾಥ್ ಅವರು ಮನೆ ತೆರಿಗೆಯಾಗಿ ಸಂಗ್ರಹಿಸಿದ ಹಣವನ್ನು ಪಂಚಾಯಿತಿ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರು ಮಂಜುನಾಥ್ ಅವರನ್ನು ಬುಧವಾರ ಪಂಚಾಯಿತಿ ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದಾರೆ.

ಮಂಜುನಾಥ್ ಅವರು 2023–24ನೇ ಸಾಲಿನಲ್ಲಿ ಮನೆ ತೆರಿಗೆಯಾಗಿ ವಸೂಲಿಸಿದ 1,18,367 ರೂಪಾಯಿ ಹಾಗೂ 2024–25ನೇ ಸಾಲಿನಲ್ಲಿ ವಸೂಲಿಸಿದ 3,36,021ರೂಪಾಯಿ ಸೇರಿದಂತೆ ಒಟ್ಟು 4,54,388 ರೂಪಾಯಿ ಹಣವನ್ನು ಪಂಚಾಯಿತಿ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಣದ ದುರುಪಯೋಗದ ವಿಚಾರ ಬೆಳಕಿಗೆ ಬಂದ ಬಳಿಕ ಶಿವಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಅವರು ಮಂಜುನಾಥ್ಗೆ ನೋಟಿಸ್ ನೀಡಿದ್ದರು. ಬಳಿಕ ಮಂಜುನಾಥ್ ಸುಮಾರು 3 ಲಕ್ಷವನ್ನು ಪಂಚಾಯಿತಿಗೆ ಮರುಪಾವತಿಸಿದ್ದು, ಉಳಿದ ಹಣವನ್ನು ಪಾವತಿಸದೆ ವಂಚಿಸಿರುವುದಾಗಿ ಪಿಡಿಒ ತಿಳಿಸಿದ್ದಾರೆ. ಒಟ್ಟಾರೆ ಸುಮಾರು 7.50 ಲಕ್ಷ ರೂಪಾಯಿಯಷ್ಟು ಹಣವನ್ನು ಸ್ವಂತಕ್ಕೆ ಬಳಸಿಕೊಂಡು ದುರುಪಯೋಗಪಡಿಸಿಕೊಂಡಿರುವ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಶಿವಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಅವರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಂಬಿಕೆ ದ್ರೋಹ ಹಾಗೂ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಪಂಚಾಯಿತಿ ಸಿಬ್ಬಂದಿಯ ವಿರುದ್ಧ ಇಲಾಖಾ ಕ್ರಮದ ಬೆನ್ನಲ್ಲೇ ಪೊಲೀಸ್ ತನಿಖೆಯೂ ಮುಂದುವರಿದಿದೆ.


