ಉಡುಪಿ: ನಿಟ್ಟೆ ಗ್ರಾಮದ ಹೋಟೆಲ್ ಸನ್ಮಾನ್ ರೆಸಿಡೆನ್ಸಿಯಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟು ಜುಗಾರಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಮಂಗಳವಾರ ದಾಳಿ ನಡೆಸಿ, ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸುಜೀತ್, ಅಭಿಮನ್ಯು, ಮಹೇಶ್, ಧೀರಜ್, ನರೇಶ್ ಕುಮಾರ್ ಹಾಗೂ ಪ್ರಶಾಂತ್ ಎಂದು ಗುರುತಿಸಲಾಗಿದೆ. ಇದೇ ವೇಳೆ ಯಶೋಧರ (ಅಣ್ಣು), ನೂರು ಮಹಮ್ಮದ್, ರವಿ ಶೆಟ್ಟಿ ಹಾಗೂ ಸತೀಶ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ವೇಳೆ ಜುಗಾರಿಗೆ ಬಳಸಲಾಗಿದ್ದ ರೂ 16,350 ನಗದು, ಇಸ್ಪೀಟು ಎಲೆಗಳು, ಏಳು ಮೊಬೈಲ್ ಫೋನ್ಗಳು ಹಾಗೂ ಕುರ್ಚಿ ಮತ್ತು ಇತರ ಪೀಠೋಪಕರಣಗಳು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಹಾಗೂ ಜುಗಾರಿ ನಡೆಸಲು ಅವಕಾಶ ಕಲ್ಪಿಸಿದ ನಿಟ್ಟೆ ಗ್ರಾಮದ ಹೋಟೆಲ್ ಸನ್ಮಾನ್ ರೆಸಿಡೆನ್ಸಿಯ ಮಾಲೀಕರ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.


