ಉಡುಪಿ : ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮೂರು ದಿನಗಳ ಸನಿವಾಸ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ಸಂಸ್ಥೆಯ ಐವೈಸಿ ಸಭಾಭವನದಲ್ಲಿ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಶಿಕ್ಷಣ ತಜ್ಞ ಪ್ರೊ. ಸಖಾರಾಮ ಸೋಮಯಾಜಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಸಾಕಾಗುವುದಿಲ್ಲ. ಉದ್ಯೋಗ ಪಡೆಯಲು ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಾರಂಗ ಆಯೋಜಿಸುವ ಸನಿವಾಸ ಶಿಬಿರಗಳು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದ್ದು, ವಿದ್ಯಾಪೋಷಕ್ ಯೋಜನೆಯ ಮೂಲಕ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನೊಂದಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಲು ಅವಕಾಶ ಕಲ್ಪಿಸುತ್ತಿದೆ ಎಂದು ಶ್ಲಾಘಿಸಿದರು.

ಶಿಬಿರದ ನಿರ್ದೇಶಕ ಪ್ರವೀಣ್ ಗುಡಿಯ ಮಾತನಾಡಿ, ಯಕ್ಷಗಾನ ಕಲಾರಂಗ ನನಗೆ ಮನೆಯಂತೆಯೇ. ಸಂಸ್ಥೆಯ ಸದಸ್ಯರು ನೀಡುತ್ತಿರುವ ಪ್ರೀತಿ ಹಾಗೂ ವಿಶ್ವಾಸ ನನಗೆ ಮತ್ತಷ್ಟು ಜವಾಬ್ದಾರಿಯನ್ನು ತಂದಿದೆ. ಇಂತಹ ಶಿಬಿರಗಳನ್ನು ಇನ್ನಷ್ಟು ವಿಸ್ತರಿಸಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸುವ ಸಾಮರ್ಥ್ಯವನ್ನು ಬೆಳೆಸಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯು. ವಿಶ್ವನಾಥ ಶೆಣೈ, ವಿಜಯಕುಮಾರ್ ಮುದ್ರಾಡಿ, ವಿಲಾಸಿನಿ ಬಿ. ಶೆಣೈ, ತಾರಾದೇವಿ, ವಿಷ್ಣುಮೂರ್ತಿ ಪ್ರಭು ಹಾಗೂ ಭುವನಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳ ಪರವಾಗಿ ಧ್ರುವ ದೇವಾಡಿಗ, ನಾಗೇಂದ್ರ ಭಟ್, ಮಿಸ್ಬಾ ಕೌಸರ್, ನಿಶ್ಚಿತ್, ಅಭಿಜ್ಞಾ ಹೆಗ್ಡೆ ಮತ್ತು ಹನುಮವ್ವ ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ 82 ವಿದ್ಯಾರ್ಥಿಗಳಿಗೆ ಗುಂಪು ಛಾಯಾಚಿತ್ರ ವಿತರಿಸಲಾಯಿತು. ಅಲ್ಲದೆ, ಅಗತ್ಯವಿರುವ 15 ವಿದ್ಯಾರ್ಥಿಗಳಿಗೆ ಪ್ರೇರಣಾ ಇನ್ಫೋಸಿಸ್ ವತಿಯಿಂದ ಕೈಗಡಿಯಾರಗಳನ್ನು ವಿತರಿಸಲಾಯಿತು. ಮೂರು ದಿನಗಳ ಶಿಬಿರದಲ್ಲಿ ರೆಸ್ಯೂಮ್ ತಯಾರಿಕೆ, ಸಂದರ್ಶನ ಎದುರಿಸುವ ಕೌಶಲ್ಯ, ವ್ಯಕ್ತಿತ್ವ ವಿಕಸನ, ಮಾನವೀಯ ಮೌಲ್ಯಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತಂತೆ ವಿವಿಧ ತಜ್ಞರು ಮಾರ್ಗದರ್ಶನ ನೀಡಿದರು. ಸಂಸ್ಥೆಯ ಸದಸ್ಯರಾದ ಮರ್ಣೆ ಉಮೇಶ್ ಭಟ್, ಅನಂತರಾಜ ಉಪಾಧ್ಯ, ಎನ್. ರಾಮ ಭಟ್ ಹಾಗೂ ಎ. ನಾಗಭೂಷಣ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ವಿದ್ಯಾಪ್ರಸಾದ್ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.


