ಉಡುಪಿ : ಜೆಎಂಎಫ್ಸಿ ನ್ಯಾಯಾಧೀಶರಾಗಿ ಆಯ್ಕೆಯಾದ ಯುವ ನ್ಯಾಯವಾದಿ ಸುಕೇಂದ್ರ ಅವರಿಗೆ ಉಡುಪಿ ಜಿಲ್ಲಾ ಅಧಿವಕ್ತ ಪರಿಷತ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಿ ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ವಕೀಲರ ಸಂಘದ ಸದಸ್ಯರಾಗಿರುವ ಸುಕೇಂದ್ರ ಅವರು ಉಡುಪಿ ನ್ಯಾಯಾಲಯದಲ್ಲಿ ಯುವ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ಜೆಎಂಎಫ್ಸಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೇ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ಏಕೈಕ ಅಭ್ಯರ್ಥಿಯಾಗಿರುವುದು ವಿಶೇಷವಾಗಿದೆ.

ಕಾರ್ಯಕ್ರಮದಲ್ಲಿ ಅಧಿವಕ್ತ ಪರಿಷತ್ ಜಿಲ್ಲಾ ಅಧ್ಯಕ್ಷ ಸಂತೋಷ್ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸುಕೇಂದ್ರ ಅವರ ಸಾಧನೆಯನ್ನು ಶ್ಲಾಘಿಸಿದರು. ಉಡುಪಿ ವಕೀಲರ ಸಂಘದ ಮಾಜಿ ಕಾರ್ಯದರ್ಶಿ ರಾಜೇಶ್ ಎ.ಆರ್. ಅಭಿನಂದನಾ ಭಾಷಣ ಮಾಡಿ, ಅವರ ಮುಂದಿನ ನ್ಯಾಯಾಂಗ ಸೇವೆಗೆ ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ಸುಕೇಂದ್ರ ಅವರು ತಮ್ಮ ಯಶಸ್ಸಿಗೆ ಕಾರಣರಾದ ಹಿರಿಯ ವಕೀಲರು, ಸಹೋದ್ಯೋಗಿಗಳು ಹಾಗೂ ಕುಟುಂಬ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ವಕೀಲರ ಸಂಘದ ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ ನಿರೂಪಿಸಿದರು. ಉಡುಪಿ ಜಿಲ್ಲಾ ಅಧಿವಕ್ತ ಪರಿಷತ್ ಪ್ರಧಾನ ಕಾರ್ಯದರ್ಶಿ ಆರೂರು ಸುಕೇಶ್ ಶೆಟ್ಟಿ ವಂದಿಸಿದರು.

ಈ ಸಂದರ್ಭದಲ್ಲಿ ಅಧಿವಕ್ತ ಪರಿಷತ್ ಪದಾಧಿಕಾರಿಗಳು ಹಾಗೂ ವಕೀಲರಾದ ಶಶೀಕಲಾ ತೋನ್ಸೆ, ಕರ್ಜೆ ಬಾಲಕೃಷ್ಣ ಶೆಟ್ಟಿ, ಗಿರೀಶ್ ಎಸ್.ಪಿ. ಏಳಿಂಜೆ, ರವೀಂದ್ರ ಬೈಲೂರು, ನಾಗರಾಜ್ ಕಿನ್ನಿಮೂಲ್ಕಿ, ಆಶಿಶ್ ಶೆಟ್ಟಿ ಬೋಳ, ಸುಚಿತಾ ಶೆಟ್ಟಿ, ಕಾವ್ಯ ನಾಯ್ಕ್, ಮೇಘನಾ, ಸುಚೇತಾ ಶೆಟ್ಟಿ, ಜಯಂತ್ ರಾವ್, ಪೆಲತ್ತೂರು ರೋಹಿತ್ ಆಚಾರ್ಯ, ಶ್ರೀನಿಧಿ ಸುವರ್ಣ, ಪ್ರಸನ್ನ ಶೆಣೈ, ಲೀವನ್ ಪ್ಲಾ ಸೇರಿದಂತೆ ಹಲವು ವಕೀಲರು ಹಾಗೂ ಗಣ್ಯರು ಉಪಸ್ಥಿತರಿದ್ದರು.



