ಉಡುಪಿ: ಶಿವನು ಬೇರೆಯವರ ದೋಷಗಳನ್ನು ಕಂಠದಲ್ಲಿ (ವಿಷವಾಗಿ) ಧರಿಸಿ, ಜಗತ್ತಿಗೆ ಅಮೃತವನ್ನು ನೀಡಿದಂತೆ, ನಾವು ಕೂಡ ಇತರರ ತಪ್ಪುಗಳನ್ನು ಎಣಿಸುವ ಬದಲು ಅವರ ಸದ್ಗುಣಗಳನ್ನು ಪ್ರಚಾರ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ಸಮಾಜದಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕರೆ ನೀಡಿದರು.

ನಗರದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ, ಡಾ. ನಾಡೋಜ ಜಿ. ಶಂಕರ್ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ರುದ್ರ ದೇವರ ಆರಾಧನೆಯೊಂದಿಗೆ ಆ ದೇವನ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಭಕ್ತರ ಮೂಲ ಕರ್ತವ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಪ್ರತಿಯೊಂದು ದೇವಸ್ಥಾನವೂ ಅದ್ಭುತ ಶಕ್ತಿಯ ಕೇಂದ್ರವಾಗಿದೆ. ಇಂದು ಲಕ್ಷಾಂತರ ಭಕ್ತರು ದೇವರ ಸನ್ನಿಧಿಗೆ ಬಂದು ಶ್ರದ್ಧೆಯಿಂದ ಪ್ರಾರ್ಥನೆ ಮಾಡುತ್ತಿದ್ದಾರೆ. ಇಂತಹ ಭಕ್ತಿಪೂರ್ವಕ ಸ್ಮರಣೆಯಿಂದ ದೇವರು ಖಂಡಿತವಾಗಿಯೂ ಭಕ್ತರ ಸಕಲ ಕಷ್ಟಗಳನ್ನು ನಿವಾರಿಸಿ, ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಶಾಸಕ ರಘುಪತಿ ಭಟ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿಗಳಾದ ಉದಯಕುಮಾರ್ಶೆಟ್ಟಿ ಮುನಿಯಾಲು, ಭುವನೇಂದ್ರ ಕಿದಿಯೂರು, ಬಿಲ್ಲವ ಮಹಾಮಂಡಳದ ಉಪಾಧ್ಯಕ್ಷ ಬಿ. ಎನ್. ಶಂಕರ್ ಪೂಜಾರಿ, ಹಿರಿಯ ನ್ಯಾಯವಾದಿ ವಾಣಿ ವಿ. ರಾವ್, ಸಿಎ ಗಣೇಶ್ ರಾವ್, ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ, ಕಾಂಚನ್ ಹುಂಡೈ ಮೋಟಾರ್ಸ್ ಪ್ರವರ್ತಕ ಪ್ರಸಾದ್ ರಾಜ್ ಕಾಂಚನ್, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಶಶಿಧರ್ ಅಮೀನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಯಾನಂದ, ಧನಂಜಯ, ಪಾಕತಜ್ಞ ಜಯಂತ್ ಎಸ್. ಬಿ. ಹಾಗೂ ಗೀತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ ಸ್ವಾಗತಿಸಿ, ಅರ್ಪಿತಾ ಪ್ರಶಾಂತ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು. ಪ್ರಧಾನ ಅರ್ಚಕ ವಾಸುದೇವ ಉಪಾಧ್ಯಾಯ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



