ಉಡುಪಿ: ಯಕ್ಷಗಾನ ಪ್ರದರ್ಶನದ ವೇಳೆ ಪ್ರೇಕ್ಷಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಕಲಾವಿದರ ನಡೆ ಇದೀಗ ಯಕ್ಷಗಾನ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕುಂದಾಪುರ ತಾಲೂಕಿನ ಹೆನ್ನಾಬೈಲಿನಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಭಾಗವತಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರೊಬ್ಬರು ಶಿಳ್ಳೆ ಹಾಕಿದ ಹಿನ್ನೆಲೆಯಲ್ಲಿ, ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಉಜಿರೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ವೇಷಧಾರಿಯಾಗಿ ಪಾತ್ರ ನಿರ್ವಹಿಸುತ್ತಿದ್ದ ಅಶೋಕ್ ಭಟ್, ಪ್ರದರ್ಶನದ ಮಧ್ಯದಲ್ಲೇ ಪ್ರೇಕ್ಷಕರ ವರ್ತನೆಯನ್ನು ಖಂಡಿಸಿ, ಯಕ್ಷಗಾನ ಪ್ರದರ್ಶನದ ವೇಳೆ ಶಿಸ್ತನ್ನು ಕಾಪಾಡಬೇಕು, ಶಿಳ್ಳೆ ಹಾಕಿ ಸೌಜನ್ಯ ಮೀರಬೇಡಿ, ಇಂತಹ ಪ್ರೇಕ್ಷಕರ ಅಗತ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಲಾವಿದರ ನಡೆ ಕುರಿತು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಕಲಾವಿದರ ಕ್ರಮವನ್ನು ಸಮರ್ಥಿಸಿ, ಯಕ್ಷಗಾನಂತಹ ಸಾಂಪ್ರದಾಯಿಕ ಕಲೆಯಲ್ಲಿ ಪ್ರೇಕ್ಷಕರು ಶಿಸ್ತಿನಿಂದ ವರ್ತಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಪಾತ್ರದಲ್ಲಿರುವಾಗಲೇ ಪ್ರೇಕ್ಷಕರಿಗೆ ಪಾಠ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಒಟ್ಟಾರೆ, ಈ ಘಟನೆ ಯಕ್ಷಗಾನ ಕಲೆಯ ಗೌರವ, ಕಲಾವಿದ-ಪ್ರೇಕ್ಷಕರ ನಡುವಿನ ಸಂಬಂಧ ಮತ್ತು ಶಿಸ್ತಿನ ಅಗತ್ಯತೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.



