ಉಡುಪಿ : ಸಿದ್ದಾಪುರ ಗ್ರಾಮದ ಮೇಜ್ಜೆಡ್ಡು ಪ್ರದೇಶದಲ್ಲಿರುವ ಮನೆಯಲ್ಲಿ ಅಕ್ರಮವಾಗಿ ಅಂದರ್–ಬಾಹರ್ ಜುಗಾರಿ ಆಟ ನಡೆಯುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿರುವ ಘಟನೆ ಮಾರ್ಚ್ 23ರಂದು ಸಂಜೆ ನಡೆದಿದೆ.

ಕುಂದಾಪುರ ಗ್ರಾಮಾಂತರ ವೃತ್ತದ ಸಿ.ಪಿ.ಐ ಸಂತೋಷ್ ಎ. ಕಾಯ್ಕಿಣಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ, ಸುಧಾಕರ ಶೆಟ್ಟಿ ಅವರ ಮನೆಯ ಆವರಣದಲ್ಲಿ ಆರು ಮಂದಿ ವೃತ್ತಾಕಾರದಲ್ಲಿ ಕುಳಿತು ಹಣವನ್ನು ಪಣವಾಗಿಟ್ಟು ಜುಗಾರಿ ಆಟ ಆಡುತ್ತಿರುವುದು ಪತ್ತೆಯಾಗಿದೆ. ದಾಳಿ ನಡೆಸಿದಾಗ ಆರು ಮಂದಿಯಲ್ಲಿ ಇಬ್ಬರು ಪರಾರಿಯಾಗಿದ್ದು, ನಾಲ್ವರನ್ನು ಬಂಧಿಸಲಾಯಿತು. ಬಂಧಿತರನ್ನು ಸುಧಾಕರ ಶೆಟ್ಟಿ (52), ರಮೇಶ್ (46), ಮನೋಹರ (46) ಹಾಗೂ ಮಹೇಶ್ (43) ಎಂದು ಗುರುತಿಸಲಾಗಿದೆ. ಪರಾರಿಯಾದವರನ್ನು ಹರ್ಷ ಹಾಗೂ ಕೃಷ್ಣ ಪೂಜಾರಿ ಎಂದು ತಿಳಿದುಬಂದಿದೆ.

ಬಂಧಿತರ ಬಳಿಯಿಂದ ಒಟ್ಟು 6,700 ರೂಪಾಯಿ ನಗದು, ಇನ್ನಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



