ಉಡುಪಿ: ಶ್ರೀಲಕ್ಷ್ಮೀ ಎಕ್ಸ್ಪ್ರೆಸ್ ಬಸ್ ಸಂಸ್ಥೆಯ ಮಾಲಕರಾದ ವಕ್ವಾಡಿ ದ್ಯಾಗಳಮನೆ ಮೂಲದ, ಪ್ರಸ್ತುತ ಮಂದರ್ತಿ ಹೆಗ್ಗುಂಜೆ ನಿಡೂರು ನಿವಾಸಿ ವಿಠಲ ಶೆಟ್ಟಿ (96) ಅವರು ತಮ್ಮ ನಿವಾಸದಲ್ಲಿ ನಿಧನರಾದರು.

ಸುಮಾರು 35 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳಿಗೆ ಸುಗಮ ಸಾರಿಗೆ ಸೌಲಭ್ಯ ಒದಗಿಸಬೇಕೆಂಬ ಧ್ಯೇಯದಿಂದ ‘ಶ್ರೀಲಕ್ಷ್ಮೀ’ ಹೆಸರಿನಲ್ಲಿ ಬಸ್ ಸಂಸ್ಥೆಯನ್ನು ಆರಂಭಿಸಿದ ಅವರು, ಅದನ್ನು ವಿಸ್ತರಿಸಿ 32 ಬಸ್ಸುಗಳ ಮಟ್ಟಿಗೆ ಬೆಳೆಸಿದ್ದರು. ಕುಂದಾಪುರ, ಹೆಬ್ರಿ, ಉಡುಪಿ, ಗೋಳಿಯಂಗಡಿ, ಮಂದರ್ತಿ, ಕೊಕ್ಕರ್ಣೆ, ಪೇತ್ರಿ ಮೊದಲಾದ ಭಾಗಗಳಲ್ಲಿ ಸಂಸ್ಥೆಯ ಬಸ್ಸುಗಳು ಜನಸೇವೆಯಲ್ಲಿ ತೊಡಗಿದ್ದವು.

ಧಾರ್ಮಿಕ ಹಾಗೂ ದಾನಧರ್ಮ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ವಿಠಲ ಶೆಟ್ಟಿ ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಆರು ಮಂದಿ ಪುತ್ರರನ್ನು ಅಗಲಿದ್ದಾರೆ.ಇವರ ನಿಧನಕ್ಕೆ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು. ದೀರ್ಘಕಾಲದಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಚಾಲಕರು ಹಾಗೂ ನಿರ್ವಾಹಕರು ತಮ್ಮ ಪ್ರಿಯ ಉದ್ಯೋಗದಾತರ ಅಂತಿಮ ದರ್ಶನಕ್ಕಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಬಸ್ ಸಂಚಾರ ಸ್ಥಗಿತಗೊಂಡು, ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ಈ ನಡುವೆ, ಬುಧವಾರ (ಮಾರ್ಚ್ 18)ದಿಂದ ಬಸ್ ಸೇವೆಗಳು ಎಂದಿನಂತೆ ಪುನರಾರಂಭವಾಗಲಿವೆ ಎಂದು ಸಂಸ್ಥೆಯ ಮುಖ್ಯಸ್ಥ ಹರೀಶ್ ಶೆಟ್ಟಿ ತಿಳಿಸಿದ್ದಾರೆ.



