ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ಶಾಂತಿನಗರದಲ್ಲಿ ನಡೆದ ಮನೆಗಳ್ಳತನ ಪ್ರಕರಣವನ್ನು 12 ಗಂಟೆಗಳೊಳಗೆ ಭೇದಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರು ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಮೂಲದ ಹಾಗೂ ಪ್ರಸ್ತುತ ಉಡುಪಿಯ ಹನುಮಂತನಗರದಲ್ಲಿ ವಾಸವಿರುವ ಸಂತೋಷ್ (20), ಬಡನಿಡಿಯೂರು ಹಂಪನಕಟ್ಟ ನಿವಾಸಿ ಚಿರಂತನ್ (21) ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಾಗಿದ್ದಾರೆ.


ಮಾರ್ಚ್ 12ರಂದು ಶಾಂತಿನಗರ ನಿವಾಸಿ ಸಂಗೀತ ಮಡಿವಾಳ ಅವರ ಮನೆಯಲ್ಲಿ ಹಾಡು ಹಗಲೇ ಕಳ್ಳತನ ನಡೆದಿತ್ತು. ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿ ಇಡಲಾಗಿದ್ದ ಚಿನ್ನ–ಬೆಳ್ಳಿ ಆಭರಣಗಳು ಹಾಗೂ ನಗದು ಕಳವು ಮಾಡಿದ್ದರು. ಸುಮಾರು 4,47,000 ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವಾಗಿತ್ತು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಶಿವಳ್ಳಿ ಗ್ರಾಮದ ಸಿಮ್ರಾ ಬ್ರಿಡ್ಜ್ ಸಮೀಪ ವಶಕ್ಕೆ ಪಡೆದಿದೆ. ಬಂಧಿತರಿಂದ 4,47,000 ರೂ. ಮೌಲ್ಯದ ಚಿನ್ನ–ಬೆಳ್ಳಿ ಆಭರಣಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.



