ಉಡುಪಿ: ನಗರದ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಕಾಲೇಜಿನ ಪ್ರೀತಿಯ ಗ್ರಂಥಪಾಲಕರಾಗಿದ್ದ ಸದಾಶಿವ ಹಾಗೂ ಹಿರಿಯ ನ್ಯಾಯವಾದಿ ಮತ್ತು ಆದರ್ಶ ಗುರುಗಳಾದ ಅಲೆವೂರು ಮಾಧವ ಆಚಾರ್ಯ ಅವರ ಸ್ಮರಣಾರ್ಥ ಸಂತಾಪ ಸಭೆ ಹಾಗೂ ನುಡಿನಮನ ಕಾರ್ಯಕ್ರಮ ನಡೆಯಿತು. ಸದಾಶಿವ ಅವರು ಹಲವು ವರ್ಷಗಳ ಕಾಲ ಕಾಲೇಜಿನ ಗ್ರಂಥಪಾಲಕರಾಗಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಸೇವಾಭಾವದಿಂದ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ಅವರ ಸರಳತೆ ಮತ್ತು ಆತ್ಮೀಯತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿತ್ತು.

ಹಿರಿಯ ನ್ಯಾಯವಾದಿಯಾಗಿದ್ದ ಅಲೆವೂರು ಮಾಧವ ಆಚಾರ್ಯ ಅವರು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಅನೇಕ ವಿದ್ಯಾರ್ಥಿಗಳನ್ನು ಕಾನೂನು ಕ್ಷೇತ್ರದಲ್ಲಿ ರೂಪಿಸಿದ ಆದರ್ಶ ಗುರುಗಳಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಬೆಳೆದ ಅನೇಕ ವಿದ್ಯಾರ್ಥಿಗಳು ಇಂದು ನ್ಯಾಯಾಂಗ ಮತ್ತು ಕಾನೂನು ಕ್ಷೇತ್ರದಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಇಬ್ಬರಿಗೂ ನುಡಿನಮನ ಸಲ್ಲಿಸಿ ಪ್ರೊ. ರೋಹಿತ್ ಎಸ್. ಅಮೀನ್ ಮಾತನಾಡಿ, ಅವರ ಸೇವೆ, ವ್ಯಕ್ತಿತ್ವ ಹಾಗೂ ವಿದ್ಯಾರ್ಥಿಗಳ ಮೇಲಿನ ಪ್ರೀತಿಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಖಾ ಕೆ., ಉಪ ಪ್ರಾಂಶುಪಾಲರಾದ ಡಾ. ಪ್ರೀತಿ ಹರೀಶ್ ರಾಜ್, ಕಾನೂನು ವಿಭಾಗದ ಮುಖ್ಯಸ್ಥೆ ಡಾ. ಜಯಮೋಲ್ ಪಿ.ಎಸ್., ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.



