ಉಡುಪಿ: ಮಹಿಳೆಯೊಬ್ಬರನ್ನು ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಸಮೀಪದ ಕನರಾಡಿ ಎಂಬಲ್ಲಿ ನಡೆದಿದೆ. ವನಜ ಪೂಜಾರಿ ಎಂಬವರು ಕೊಲೆಯಾದ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಲೇರಿಯನ್ ಮೆಂಡೋನ್ಸಾ ಹಾಗೂ ಪ್ರವೀಣ್ ಮೆಂಡೋನ್ಸಾ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಸೋಮವಾರ ರಾತ್ರಿ ಸುಮಾರು 8.30ರ ವೇಳೆಗೆ ವಲೇರಿಯನ್ ಮೆಂಡೋನ್ಸಾ ಅವರ ಮನೆಯಲ್ಲಿ ವನಜ ಪೂಜಾರಿ, ವಲೇರಿಯನ್ ಮೆಂಡೋನ್ಸಾ ಹಾಗೂ ಪ್ರವೀಣ್ ಮೆಂಡೋನ್ಸಾ ಒಟ್ಟಿಗೆ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಗಲಾಟೆ ಉಂಟಾಗಿ, ಕೋಪದ ಹೊತ್ತಿನಲ್ಲಿ ವಲೇರಿಯನ್ ಮೆಂಡೋನ್ಸಾ ಮತ್ತು ಪ್ರವೀಣ್ ಮೆಂಡೋನ್ಸಾ ಕತ್ತಿಯಿಂದ ವನಜ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಗಂಭೀರ ಗಾಯಗೊಂಡ ವನಜ ಪೂಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಣಿಪಾಲ ಫಾರೆನ್ಸಿಕ್ ತಂಡ, ಸೋಕೋ ತಂಡ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.



