ಉಡುಪಿ: ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಪ್ರಾರ್ಥನೆ ರಾಜಕೀಯ ಆರಂಭವಾಗಿದೆ. ಕಾಂಗ್ರೆಸ್ನ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ದೇವರು ಹಾಗೂ ದೈವದ ಮೊರೆ ಹೋಗಿದ್ದಾರೆ.

ಸೊರಕೆ ತಮ್ಮ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದು, ನಿಂದನೆ ಹಾಗೂ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸುರೇಶ್ ಶೆಟ್ಟಿ ಗುರ್ಮೆ, ತಮ್ಮ ಆಪ್ತರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಕಾಪುವಿನ ಹೊಸ ಮಾರಿ ಗುಡಿ ಮತ್ತು ಕಟಪಾಡಿ ಪೇಟೆಬೆಟ್ಟು ಬಾಬುಸ್ವಾಮಿ ಕೊರಗಜ್ಜ ದೈವದ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವರು ನನಗೆ ಸಾಕಷ್ಟು ಸಂಪತ್ತು ಕೊಟ್ಟಿದ್ದಾನೆ. ರಾಜಕೀಯ ನನ್ನ ಗಂಜಿ ಕೇಂದ್ರ ಅಲ್ಲ ಎಂದು ಸೊರಕೆಗೆ ತಿರುಗೇಟು ನೀಡಿದರು. ದೇವರ ಮುಂದೆ ತನ್ನ ನೋವನ್ನು ತೋಡಿಕೊಂಡಿದ್ದೇನೆ ಎಂದು ಅವರು ಹೇಳಿದರು.

ಉಡುಪಿ ಕಂಬಳದ ಜಮೀನು ಹಾಗೂ ಗುದ್ದಲಿ ಪೂಜೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇತ್ತೀಚೆಗೆ ತೀವ್ರ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೆಕ್ಷನ್ 144 ಜಾರಿಗೊಳಿಸಿತ್ತು. ಬಳಿಕ ಜಿಲ್ಲೆಯ ಐವರು ಶಾಸಕರು ಹಾಗೂ ಸಂಸದರನ್ನು ಕರೆಸಿ ಗುದ್ದಲಿ ಪೂಜೆ ನಡೆಸಲಾಗಿತ್ತು. ಆ ಬಳಿಕ ವಿನಯ ಕುಮಾರ್ ಸೊರಕೆ ಅವರು ಸುರೇಶ್ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಈ ಪ್ರಾರ್ಥನೆ ನಡೆದಿರುವುದಾಗಿ ತಿಳಿದುಬಂದಿದೆ.



