ಪುಣೆ: ಹೆಚ್ಚುತ್ತಿರುವ ‘ಲವ್ ಜಿಹಾದ್’ ಹಾಗೂ ‘ಮತಾಂತರ’ದ ಘಟನೆಗಳು ಭಾರತೀಯ ಸಂಸ್ಕೃತಿ, ಸನಾತನ ಧರ್ಮ ಮತ್ತು ಹಿಂದೂಸ್ಥಾನವನ್ನು ದುರ್ಬಲಗೊಳಿಸಲು ರೂಪಿಸಲಾದ ವ್ಯವಸ್ಥಿತ ಪಿತೂರಿಯಾಗಿದೆ ಎಂದು ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮಹಾರಾಜರು ಎಚ್ಚರಿಸಿದ್ದಾರೆ.

ಪುಣೆಯ ವೇದಾಚಾರ್ಯ ಘೈಸಾಸ ಗುರೂಜಿ ವೇದಪಾಠಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಭಾಗವತ ಕಥಾ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, “ಯಾವ ರೀತಿ ಈಸ್ಟ್ ಇಂಡಿಯಾ ಕಂಪನಿ ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದು ದೇಶವನ್ನು ಗುಲಾಮಗಿರಿಗೆ ತಳ್ಳಿತೋ, ಇಂದು ಅದೇ ಮಾದರಿಯಲ್ಲಿ ಮತಾಂತರದ ಮೂಲಕ ದೇಶವನ್ನು ಒಳಗಿನಿಂದಲೇ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಹೇಳಿದರು.

ಭಾರತದ ರಕ್ಷಣಾ ವ್ಯವಸ್ಥೆ ಇಂದು ಅತ್ಯಂತ ಬಲಿಷ್ಠವಾಗಿರುವುದರಿಂದ ನೇರ ದಾಳಿಗೆ ಯಾರೂ ಧೈರ್ಯ ಮಾಡಲಾರರು. ಆದ್ದರಿಂದಲೇ ನಿರ್ದಿಷ್ಟ ಜನಸಂಖ್ಯೆಯನ್ನು ಹೆಚ್ಚಿಸುವ ಮೂಲಕ ರಾಜಕೀಯ ಪ್ರಾಬಲ್ಯ ಸಾಧಿಸುವ ಯತ್ನಗಳು ನಡೆಯುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಲವ್ ಜಿಹಾದ್ ಮತ್ತು ಮತಾಂತರವು ಕೇವಲ ಧಾರ್ಮಿಕ ವಿಷಯವಲ್ಲ, ಅದು ದೀರ್ಘಕಾಲಿಕ ರಾಜಕೀಯ ತಂತ್ರದ ಭಾಗವಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ರಾಷ್ಟ್ರಭಕ್ತ ನ್ಯಾಯವಾದಿ ಸಮಿತಿಯ ಸದಸ್ಯರು ಜಗದ್ಗುರು ಶಂಕರಾಚಾರ್ಯರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆದರು. ಸಮಿತಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ ಜಗದ್ಗುರುಗಳು, ಸಮಾಜ ಜಾಗೃತಿಗೆ ಈ ಸಂಘಟನೆಗಳು ಶ್ರೇಷ್ಠ ಕಾರ್ಯ ಮಾಡುತ್ತಿವೆ ಎಂದು ಹೇಳಿದರು.

ಮತಾಂತರವನ್ನು ತಡೆಯಲು ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರಗಳು ಇತರ ರಾಜ್ಯಗಳ ಮಾದರಿಯಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು. ಅಲ್ಪಸಂಖ್ಯಾತರಿಗೆ ಅವರ ಧಾರ್ಮಿಕ ಶಿಕ್ಷಣದ ಸ್ವಾತಂತ್ರ್ಯ ಇರುವಂತೆ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಹಿಂದೂ ಮಕ್ಕಳಿಗೆ ಧರ್ಮ ಹಾಗೂ ಸಂಸ್ಕಾರದ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಸಲಹೆ ನೀಡಿದರು. ಕೊನೆಯಲ್ಲಿ, ಈ ವಿಷಯದ ಗಂಭೀರತೆಯನ್ನು ಅರಿತು ಎಲ್ಲಾ ರಾಜಕೀಯ ಪಕ್ಷಗಳು, ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರಪ್ರೇಮಿ ಸಂಘಟನೆಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಜಗದ್ಗುರು ಶಂಕರಾಚಾರ್ಯರು ಕರೆ ನೀಡಿದರು.



