ಉಡುಪಿ: ಜಾಗದ ತಕರಾರು ಹಾಗೂ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಪ್ರಮುಖ ಸಾಕ್ಷಿದಾರರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಯೋಗೀಶ್ ಆಚಾರ್ಯನನ್ನು ಪೊಲೀಸರು ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA) ಅಡಿಯಲ್ಲಿ ಮರುಬಂಧಿಸಿದ್ದಾರೆ.

2022ರ ಡಿಸೆಂಬರ್ನಲ್ಲಿ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾಗದ ತಕರಾರು ಹಲ್ಲೆ ಪ್ರಕರಣ ಹಾಗೂ 2023ರ ಮಾರ್ಚ್ನಲ್ಲಿ ಶರತ್ ಶೆಟ್ಟಿ ಕೊಲೆ ಪ್ರಕರಣಗಳಲ್ಲಿ ಚಂದ್ರಶೇಖರ ಶೆಟ್ಟಿ ಪ್ರಮುಖ ಸಾಕ್ಷಿಯಾಗಿದ್ದರು. ಈ ಹಿನ್ನೆಲೆಯಲ್ಲಿ 2025 ಅಕ್ಟೋಬರ್ 20ರಂದು ಸಾಕ್ಷಿ ನೀಡದಂತೆ ಹಾಗೂ ಪ್ರಕರಣ ರಾಜಿ ಮಾಡಿಕೊಳ್ಳುವಂತೆ ಯೋಗೀಶ್ ಆಚಾರ್ಯ ಹಾಗೂ ಸಹಚರರು ಚಂದ್ರಶೇಖರ ಶೆಟ್ಟಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯ ಬಳಿಕ ಯೋಗೀಶ್ ಆಚಾರ್ಯನನ್ನು ಮೊದಲು ಬಂಧಿಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ನಂತರ ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ಯೋಗೀಶ್ ಆಚಾರ್ಯ ಹಾಗೂ ಕಲಿ ಯೋಗೀಶ್ ವಿರುದ್ಧ ಕೋಕಾ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.

ತನಿಖೆ ಮುಂದುವರಿಸಿದ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ಐಪಿಎಸ್ ನೇತೃತ್ವದ ತಂಡ ಯೋಗೀಶ್ ಆಚಾರ್ಯನನ್ನು ಮರುಬಂಧಿಸಿ ಮೈಸೂರು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಇನ್ನೊಬ್ಬ ಆರೋಪಿ ಕಲಿ ಯೋಗೀಶ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.



