ಬೆಂಗಳೂರು: ಉಡುಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರ ರೆಸಾರ್ಟ್ನಲ್ಲಿ ಯಾವುದೇ ಮಾನ್ಯ ದಾಖಲೆಗಳಿಲ್ಲದ ಅಕ್ರಮ ವಿದೇಶಿ ವಲಸಿಗರಿಗೆ ಕೆಲಸ ನೀಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಅತ್ಯಂತ ಗಂಭೀರ ಮತ್ತು ಖಂಡನೀಯ ವಿಷಯವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ, ನ್ಯಾಯವಾದಿ ಅರುಣ್ ಕುಂದರ್ ಕಲ್ಗದ್ದೆ ಹೇಳಿದ್ದಾರೆ.

ಒಂದೆಡೆ ದೇಶದ ಭದ್ರತೆ, ಕಾನೂನು ಪಾಲನೆ ಬಗ್ಗೆ ದೊಡ್ಡ ಮಾತುಗಳನ್ನು ಆಡುವ ಆಡಳಿತ ಪಕ್ಷದ ನಾಯಕರೇ ಮತ್ತೊಂದೆಡೆ ಕಾನೂನನ್ನು ತುಳಿದು ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡಿರುವುದು ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದೆ. ಅಕ್ರಮ ವಲಸಿಗರನ್ನು ಉದ್ಯೋಗಕ್ಕೆ ನೇಮಿಸುವುದು ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಇದು ಸ್ಥಳೀಯ ಯುವಕರ ಉದ್ಯೋಗ ಹಕ್ಕಿಗೆ ಹೊಡೆತ ನೀಡುವ ಕಾರ್ಯವೂ ಆಗಿದೆ. ಈ ಪ್ರಕರಣವನ್ನು ಸಣ್ಣ ವಿಷಯವಾಗಿ ಪರಿಗಣಿಸದೇ, ಯಾವುದೇ ರಾಜಕೀಯ ಒತ್ತಡಗಳಿಗೆ ಒಳಗಾಗದೇ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರು ಎಂಬುದನ್ನು ಪತ್ತೆಹಚ್ಚಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ.

ಹಾಗೆಯೇ, ಇಂತಹ ಅಕ್ರಮ ಚಟುವಟಿಕೆಗಳಿಗೆ ಮೌನಸಮ್ಮತಿ ನೀಡುವ ಅಥವಾ ರಕ್ಷಣೆ ನೀಡುವ ಯಾವುದೇ ಪ್ರಯತ್ನಗಳನ್ನು ಸರ್ಕಾರ ಕೈಬಿಡಬೇಕು. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆ ಆಡಳಿತದ ಮೇಲಿದೆ ಎಂದು ಅರುಣ್ ಕುಂದರ್ ಕಲ್ಗದ್ದೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.



