ಉಡುಪಿ : ಜಠರಗರುಳಿನ ಚಿಕಿತ್ಸೆ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿರುವ ಡಾ. ಶಿರನ್ ಶೆಟ್ಟಿ ಅವರು ಜಪಾನ್ನ ಒಸಾಕಾ ಕ್ಯಾನ್ಸರ್ ಸೆಂಟರ್ ನಲ್ಲಿ ಪ್ರತಿಷ್ಠಿತ ಸುಧಾರಿತ ಎಂಡೋಸ್ಕೋಪಿ ಕಾರ್ಯಾಗಾರವನ್ನು ವಿಶ್ವಪ್ರಸಿದ್ಧ ಎಂಡೋಸ್ಕೋಪಿಸ್ಟ್ ಪ್ರೊ. ನೊರಿಯೊ ಉಡಿಯೊ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ತರಬೇತಿ ಆರಂಭಿಕ ಕ್ಯಾನ್ಸರ್ ಪತ್ತೆ, ಕನಿಷ್ಠ ಆಕ್ರಮಣಕಾರಿ ಎಂಡೋಸ್ಕೋಪಿಕ್ ಚಿಕಿತ್ಸೆಗಳು ಮತ್ತು ಇತ್ತೀಚಿನ ಸೂಕ್ಷ್ಮ ಚಿತ್ರಣ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿತ್ತು.

ತರಬೇತಿಯ ಸಮಯದಲ್ಲಿ ಡಾ. ಶೆಟ್ಟಿ ಅವರು ಇಮೇಜ್–ಎನ್ಹಾನ್ಸ್ಡ್ ಎಂಡೋಸ್ಕೋಪಿ (ಬಯಾಪ್ಸಿ ಮಾಡದೆ ಕ್ಯಾನ್ಸರ್ ಪತ್ತೆ ಮಾಡಲು ನೆರವಾಗುವ ತಂತ್ರ), ಸೂಕ್ಷ್ಮ ಹಂತದಲ್ಲೇ ಕ್ಯಾನ್ಸರ್ಗಳನ್ನು ಗುರುತಿಸುವ ತಂತ್ರ, ಆರಂಭಿಕ ಹಂತದ ರೋಗಶಾಸ್ತ್ರ ಪತ್ತೆಯಲ್ಲಿ ನಿಖರತೆಯನ್ನು ಹೆಚ್ಚಿಸುವ ವಿಧಾನ ಇವುಗಳಲ್ಲಿ ಪರಿಣತಿ ಗಳಿಸಿದ್ದಾರೆ. ಈ ತಂತ್ರಜ್ಞಾನದಿಂದ ಕ್ಯಾನ್ಸರ್ಗಳನ್ನು ಪ್ರಸ್ತುತ ಗುರುತಿಸಲಾಗದ ಹಂತದಲ್ಲಿಯೇ ವೇಗವಾದ ಮತ್ತು ನಿಖರ ರೋಗನಿರ್ಣಯ ಪತ್ತೆಹಚ್ಚಲು ಸಹಕಾರಿಯಾಗಲಿದ್ದು, ರೋಗಿಗಳ ಆರಂಭಿಕ ಚಿಕಿತ್ಸೆ ಮೂಲಕ ಜೀವ ಉಳಿಸುವ ಸಾಧ್ಯತೆ ಹೆಚ್ಚಳವಾಗುತ್ತದೆ. ಡಾ. ಶೆಟ್ಟಿ ಅವರು ಅತ್ಯಾಧುನಿಕ ಎಂಡೋಸ್ಕೋಪಿಕ್ ಚಿಕಿತ್ಸೆ ತಂತ್ರದಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದಾರೆ.

ಈ ವಿಧಾನದಿಂದ ಹೊಟ್ಟೆ/ಕರುಳಿನ ಭಾಗ ಕತ್ತರಿಸದೇ ಆರಂಭಿಕ ಕ್ಯಾನ್ಸರ್ ತೆಗೆದುಹಾಕಬಹುದು. ರೋಗಿಗೆ ವೇಗವಾಗಿ ಚೇತರಿಕೆ, ಕಡಿಮೆ ನೋವು ಮತ್ತು ತೊಂದರೆ, ಅಂಗದ ನೈಸರ್ಗಿಕ ರಚನೆ ಉಳಿಕೆ ಸಾಧ್ಯವಾಗುತ್ತದೆ. ಇಎಸ್ ಡಿ ಮತ್ತು ಅತಿ ಪ್ರಗತಿಯ ಎಂಡೋಸ್ಕೋಪಿಕ್ ತಂತ್ರಗಳನ್ನು ಮಣಿಪಾಲ ಈ ಪ್ರದೇಶದಲ್ಲಿ ಏಕೈಕವಾಗಿ ಮತ್ತು ಭಾರತದಲ್ಲೇ ಕೆಲವೇ ದೊಡ್ಡ ಕೇಂದ್ರಗಳಲ್ಲಿ ಒಂದಾಗಿ ಲಭ್ಯವಾಗುವಂತೆ ಮಾಡಿರುವುದು ಡಾ. ಶೆಟ್ಟಿಯವರ ಸಾಧನೆಯ ಮಹತ್ವ.

ಇದರಿಂದ ಮಣಿಪಾಲದಲ್ಲಿ ಜಠರಗರುಳಿನ ಮತ್ತು ಯಕೃತ್ತಿನ ಆರೈಕೆಯಲ್ಲಿ ಮತ್ತಷ್ಟು ಬಲವಾದ ವೈದ್ಯಕೀಯ ಮೂಲಸೌಕರ್ಯ, ಜಾಗತಿಕ ಮಟ್ಟದ ರೋಗನಿರ್ಣಯ ಮತ್ತು ಚಿಕಿತ್ಸೆ, ಅಂತರರಾಷ್ಟ್ರೀಯ ಮಾನದಂಡದ ಕ್ಯಾನ್ಸರ್ ಆರೈಕೆ ಲಭ್ಯವಾಗಲಿದೆ. ಮುನ್ನಡೆಯ ಕಾರ್ಯವಿಧಾನಗಳಿದ್ದರೂ, ಇವುಗಳನ್ನು ಕೈಗೆಟುಕುವ ದರದಲ್ಲಿ, ಎಲ್ಲ ವರ್ಗದ ರೋಗಿಗಳಿಗೆ ಲಭ್ಯವಾಗುವಂತೆ ಮಣಿಪಾಲ ಆಸ್ಪತ್ರೆ ವ್ಯವಸ್ಥೆ ಮಾಡಲಿದೆ ಎಂದು ಡಾ. ಶಿರನ್ ಶೆಟ್ಟಿ ತಿಳಿಸಿದ್ದಾರೆ. ಸಕಾಲಿಕ ತಪಾಸಣೆ ಮತ್ತು ಆರಂಭಿಕ ಹಸ್ತಕ್ಷೇಪ ಜೀವ ಉಳಿಸಲು ಅತ್ಯಗತ್ಯ ಎಂದು ಮನವಿ ಮಾಡಿದ್ದಾರೆ.



