ಉಡುಪಿ :ಗೋ ಸಾಗಾಟದಲ್ಲಿ ಬಳಸುವ ವಾಹನಗಳನ್ನು ವಶಪಡಿಸಿದಾಗ ಬ್ಯಾಂಕ್ ಗ್ಯಾರಂಟಿ ಪಡೆಯುವ ಪ್ರಸ್ತುತ ನಿಯಮವನ್ನು ಕೈಬಿಟ್ಟು, ಕೇವಲ ಇಂಡೆಮ್ನಿಟಿ ಬಾಂಡ್ನ ಆಧಾರದ ಮೇಲೆ ಬಿಡುಗಡೆ ಮಾಡಲು ಅವಕಾಶ ನೀಡುವ ಪ್ರಸ್ತಾವನೆ ಕ್ಯಾಬಿನೆಟ್ ಸಭೆಯಲ್ಲಿ ಅಂಗೀಕರಿಸಲಾಗಿದೆ ಎನ್ನುವ ಮಾಹಿತಿ ಇದೆ. ಈ ತಿದ್ದುಪಡಿ ಗೋ ಕಳ್ಳರಿಗೆ ಸಹಕಾರ ನೀಡಲಿದೆ, ಇದು ಗೋವಂಶದ ರಕ್ಷಣೆಗೆ ಗಂಭೀರ ಹಾನಿ ಉಂಟುಮಾಡಲಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಸುನೀಲ್ ಕೆಆರ್ ಹೇಳಿದರು.

ಅವರು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಸೆಕ್ಷನ್ 8ರ ಪ್ರಕಾರ, ಅಕ್ರಮ ಗೋ ಸಾಗಾಣಿಕೆಯಲ್ಲಿ ಸಿಕ್ಕಿಬಿದ್ದ ವಾಹನವನ್ನು ವಶಪಡಿಸಿಕೊಂಡಾಗ, ಅದರ ಮಾರುಕಟ್ಟೆ ಮೌಲ್ಯದಷ್ಟೇ ಬ್ಯಾಂಕ್ ಗ್ಯಾರಂಟಿ ಸಲ್ಲಿಸಿದ ನಂತರ ಮಾತ್ರ ಬಿಡುಗಡೆ ಮಾಡಲಾಗುತ್ತದೆ. ಈ ನಿಯಮದಿಂದ ರಾಜ್ಯದಲ್ಲಿ ಗೋ ಸಾಗಾಟ ಪ್ರಕರಣಗಳಲ್ಲಿ ಗಣನೀಯ ಕಡಿತ ಕಂಡಿದ್ದು, ಸಾವಿರಾರು ಗೋವಂಶಗಳ ರಕ್ಷಣೆಗೆ ಇದು ಕಾರಣವಾಗಿದೆ. ಗೋ ಸಾಗಾಟ ಆರೋಪಿಗಳಿಗೆ ಬ್ಯಾಂಕ್ ಗ್ಯಾರಂಟಿ ಪಡೆಯಲು ಅಡಚಣೆ ಆಗುತ್ತಿದೆ ಎಂಬ ನೆಪದಲ್ಲಿ ಸರ್ಕಾರ ನಿಯಮ ಸಡಿಲಿಸಲು ಮುಂದಾಗಿದೆ. ಕೇವಲ ಇಂಡೆಮ್ನಿಟಿ ಬಾಂಡ್ ಸಾಕು ಎನ್ನುವ ತಿದ್ದುಪಡಿಯು ಅಕ್ರಮ ಸಾಗಾಣಿಕೆಗೆ ಉತ್ತೇಜನ ನೀಡುವಂತಿದ್ದು, ಸರ್ಕಾರವೇ ಗೋ ಸಾಗಾಟಗಾರರ ಪರ ನಿಂತಂತೆ ಕಾಣುತ್ತದೆ ಎಂದರು.

ಈ ಕ್ರಮದಿಂದ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ಬರುವ ಸಾಧ್ಯತೆ ಇದೆ. ಸರ್ಕಾರದ ನಿಲುವು ಸಾರ್ವಜನಿಕರಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು, ತಿದ್ದುಪಡಿಯ ವಿರುದ್ಧವಾಗಿ ಡಿಸೆಂಬರ್ 8, ಸೋಮವಾರ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ತಿದ್ದುಪಡಿ ತಕ್ಷಣ ಹಿಂತೆಗೆದುಕೊಳ್ಳಲು ವಿಹಿಪಿ ಸರ್ಕಾರಕ್ಕೆ ಆಗ್ರಹಿಸಲಿದೆ ಎಂದರು. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಪ್ರಮುಖರು ಉಪಸ್ಥಿತರಿದ್ದರು.



