ಉಡುಪಿ: ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಸಂವಿಧಾನ ದಿನಾಚರಣೆಯ ಪ್ರಯುಕ್ತ ಅಣಕು ಸಂವಿಧಾನ ಕಾರ್ಯಕ್ರಮ ನಡೆಯಿತು. ರಾಜ್ಯಶಾಸ್ತ್ರ ವಿಭಾಗದ ಮಾರ್ಗದರ್ಶನದಲ್ಲಿ ಕಾಲೇಜಿನ ಬಿ.ಎ. ವಿಭಾಗದ ವಿದ್ಯಾರ್ಥಿಗಳು ಅಣಕು ಸಂಸತ್ನ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಪ್ರತಿನಿಧಿಗಳಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಸತ್ ನಲ್ಲಿ ಪ್ರಸ್ತುತವಿರುವ ಜ್ವಲಂತ ಸಮಸ್ಯೆಗಳು ಚರ್ಚೆಗೆ ಬಂದವು. ಆಫರೇಷನ್ ಸಿಂಧೂರ್, ಮಣಿಪುರದ ಹಿಂಸೆ, ಕೃಷಿ ಸಮಸ್ಯೆ, ಕನಿಷ್ಠ ಬೆಂಬಲ ಬೆಲೆ, ಜಿಎಸ್ಟಿ, ತೆರಿಗೆ, ನಿರುದ್ಯೋಗ, ಭ್ರಷ್ಟಾಚಾರ, ಮಹಿಳಾ ಸುರಕ್ಷತೆ, ಶಿಕ್ಷಣ, ವಿದ್ಯಾರ್ಥಿಗಳ ಸಮಸ್ಯೆ ಇನ್ನಿತ್ಯಾದಿ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ವಾದ ಮಾಡಿದರು. ಆಡಳಿತ ಪಕ್ಷ ಹಾಗೂ ವಿಪಕ್ಷ ನಡುವೆ ಚರ್ಚೆ ನಡೆದು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಸಲಹೆಗಳು ಬಂದವು. ಮಧ್ಯೆ ಮಧ್ಯೆ ಜೈ ಜವಾನ್ ಜೈ ಕಿಸಾನ್ ಘೋಷಣೆ ಮೊಳಗಿತು.

ಈ ಮಾದರಿ ಯುವ ಸಂಸತ್ತಿನ ಮೂಲಕ ಸಂಪೂರ್ಣ ಸಂಸದೀಯ ಕಾರ್ಯಕಲಾಪಗಳನ್ನು ಪ್ರದರ್ಶಿಸಲಾಯಿತು. ಸಂವಿಧಾನ ಹಾಗೂ ಸಂಸದೀಯ ವ್ಯವಸ್ಥೆ ಬಗ್ಗೆ ಅರಿವನ್ನು ಮೂಡಿಸಲಾಯಿತು. ಆರೋಗ್ಯಕರ ಚರ್ಚೆಯ ಮಹತ್ವವನ್ನು ನಿರೂಪಿಸಲಾಯಿತು. ಕನ್ನಡ, ಹಿಂದಿ, ಇಂಗ್ಲೀಷ್, ತೆಲುಗು ಮುಂತಾದ ಭಾಷೆಗಲ್ಲಿ ಸದಸ್ಯರು ಮಾತನಾಡಿದರು

ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ್ ಪೈ, ಐಕ್ಯುಎಸಿ ಸಂಯೋಜಕಿ ಪ್ರೊ.ಶೈಲಜಾ ಹೆಚ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ವೀರಾ ಐಡಾ ಪಿಂಟೋ, ರಾಜ್ಯಶಾಸ್ತ್ರ ವಿಭಾಗದ ಅದಿತಿ ಭಟ್, ಪದ್ಮಜಾ, ವಿಶ್ರಾಂತ ವಿಭಾಗ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ವಿದ್ಯಾನಾಥ್ ಕೆ. ಸ್ವಾಗತಿಸಿ, ಸಂವಿಧಾನದ ಪ್ರಸ್ತಾವನೆಯನ್ನು ಓದಿದರು.



