ಉಡುಪಿ : ಬೀಡಿ ಉದ್ಯಮ ಸಂಕಷ್ಟದಲ್ಲಿದ್ದರೂ ದಶಕಗಳ ಕಾಲ ದುಡಿದ ಕಾರ್ಮಿಕರ ಶ್ರಮದಿಂದ ಮಾಲೀಕರು ಸುಸ್ಥಿತಿಗೆ ಏರಿದರೂ, ಕಾರ್ಮಿಕರ ಬಾಕಿ ಕೂಲಿಯನ್ನು ನೀಡದೆ ಅವರನ್ನು ಸಂಕಷ್ಟಕ್ಕೆ ತಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ ಆರೋಪಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಬೀಡಿ ಕಾರ್ಮಿಕರ ಅಹೋರಾತ್ರಿ ಧರಣಿ ಎರಡನೇ ದಿನಕ್ಕೂ ಮುಂದುವರಿದಿದೆ. ಕಾರ್ಮಿಕರು ದುಡಿದ ಪಾಲಿನ ಸಂಪೂರ್ಣ ಕೂಲಿ ಅವರಿಗೆ ಸಿಗಬೇಕು. ಅದರಲ್ಲಿ ಮಾಲಕರು ಇನ್ನೂ ಒಂದು ಪಾಲು ನೀಡಬೇಕೆಂದಿರುವುದು ಅತ್ಯಂತ ಅನ್ಯಾಯ. ಎರಡು ದಿನಗಳಿಂದ ಮಹಿಳಾ ಕಾರ್ಮಿಕರು ರಾತ್ರಿ ನಿದ್ದೆ ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಮೌನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಇಂಟಕ್ ಜಿಲ್ಲಾ ಅಧ್ಯಕ್ಷ ಕಿರಣ್ ಹೆಗ್ಡೆ, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಸಂಜೀವ ಬಳ್ಕೂರು ಧರಣಿಗೆ ಬೆಂಬಲ ನೀಡಿದರು. ಉಡುಪಿ ಜಿಲ್ಲಾ ಬೀಡಿ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್ ಅವರು ನವೆಂಬರ್ 28ರಂದು ಹೋರಾಟ ತೀವ್ರಗೊಳಿಸಲು ಕರೆ ನೀಡಿದರು.

ಧರಣಿಯಲ್ಲಿ ಉಮೇಶ್ ಕುಂದರ್, ಬಲ್ಕೀಸ್, ನಳಿನಿ, ಗಿರಿಜಾ, ವಸಂತಿ, ಶೀಲಾವತಿ, ಸುಭಾಶ್ಚಂದ್ರ ನಾಯಕ್, ಶಶಿಧರ ಗೊಲ್ಲ, ರಮೇಶ್ ಜತನ್ನ, ನಾಗೇಶ್ ಆಚಾರ್ಯ, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.



