ಉಡುಪಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ ಇವರ ಬಾಲರೋಗ ವಿಭಾಗದ ವತಿಯಿಂದ ಮಕ್ಕಳ ದಿನಾಚರಣೆಯನ್ನು ಆಸ್ಪತ್ರೆಯ ಪತಂಜಲಿ ಯೋಗ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್. ಇವರ ಮಾರ್ಗದರ್ಶನದಲ್ಲಿ ನೆರವೇರಿತು.

ಸ್ನಾತಕೋತ್ತರ ವಿಭಾಗದ ಅಸೋಸಿಯೇಟ್ ಡೀನ್ ಡಾ. ರಾಜಲಕ್ಷ್ಮಿ ಎಂ.ಜಿ. ಅವರು ಅಧ್ಯಕ್ಷತೆ ವಹಿಸಿ, ಮಕ್ಕಳಿಗೆ ಶುಭಕೋರಿದರು. ಬಾಲರೋಗ ವಿಭಾಗದಿಂದ ಲಭ್ಯವಿರುವ ಶಿಬಿರ, ಸ್ವರ್ಣಪ್ರಾಶನ ಹಾಗೂ ಮಕ್ಕಳ ಆರೋಗ್ಯಸಂಬಂಧಿತ ಸೇವೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕರಾದ ಡಾ. ಸುಮಾ ವಿ. ಮಲ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ “ಮಕ್ಕಳಲ್ಲಿ ಮನೆಮದ್ದಿನ ಪ್ರಯೋಗ” ವಿಷಯದ ಕುರಿತು ಮಾತನಾಡಿ, ಬಾಲರಲ್ಲಿ ಕಂಡುಬರುವ ಸಾಮಾನ್ಯ ರೋಗಗಳಲ್ಲಿ ಮನೆಮದ್ದಿನ ಉಪಯೋಗದ ಬಗ್ಗೆ ವಿವರಿಸಿದರು. ಬಾಲರೋಗ ವಿಭಾಗದ ಮುಖ್ಯಸ್ಥರಾದ ಡಾ. ಪೃಥ್ವಿರಾಜ್ ಪುರಾಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳ ದಿನಾಚರಣೆಯ ಅಂಗವಾಗಿ ಆರೋಗ್ಯವಂತ ಶಿಶು ಸ್ಪರ್ಧೆ, ಸ್ವಚ್ಛ ಮತ್ತು ಹಸಿರು ಭವಿಷ್ಯ ವಿಷಯದ ಚಿತ್ರಕಲಾ ಸ್ಪರ್ಧೆ ನಡೆಯಿತು. ಸುಮಾರು 60 ಮಕ್ಕಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಜೇತರಿಗೆ ಬಹುಮಾನ, ಭಾಗವಹಿಸಿದ ಮಕ್ಕಳಿಗೆ ಆಟಿಕೆ ಹಾಗೂ ಪ್ರಶಸ್ತಿಪತ್ರ ವಿತರಿಸಲಾಯಿತು. ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಮನಸ್ವಿತಾ ಸ್ವಾಗತಿಸಿದರು, ಡಾ. ಮನಸ್ವಿತಾ ಕಾರ್ಯಕ್ರಮ ನಿರೂಪಿಸಿದರು.



