ಉಡುಪಿ : ಸರಕಾರಿ ಜಾಗ ಖಾಸಗಿಯವರಿಗೆ ಗುತ್ತಿಗೆ ವಿಚಾರ ಸರಕಾರಿ ಜಾಗವನ್ನು ಸಾರ್ವಜನಿಕ ಉಪಯೋಗಕ್ಕಲ್ಲದೆ ಯಾವುದೇ ಸಂಸ್ಥೆಗೆ ನೀಡಬಾರದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ವಿನಂತಿ ಮಾಡಲಾಯಿತು.

ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅಧ್ಯಕ್ಷರಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ಗೆ ಕರ್ನಾಟಕ ಜಲ ಸಾರಿಗೆ ಮಂಡಳಿಯು ಮಲ್ಪೆಯ ಹನುಮಾನ್ನಗರದ ಸೀ ವಾಕ್, ಹನುಮಾನ್ ಭಜನಾ ಮಂದಿರದ ಸುತ್ತಮುತ್ತಲಿನ ಸುಮಾರು 8.00 ಎಕರೆ ವಿಸ್ತೀರ್ಣದ ಸರಕಾರಿ ಜಾಗವನ್ನು 15 ವರ್ಷಗಳ ಅವಧಿಗೆ ಕಳೆದ ಎಪ್ರಿಲ್ ತಿಂಗಳಿನಲ್ಲಿ ಗುತ್ತಿಗೆ ನೀಡಲಾಗಿದ್ದು ಮಲ್ಪೆ ಕಡಲ ತೀರದ ಪ್ರಕೃತಿ ರಮಣೀಯವಾದ ಈ ಜಾಗವನ್ನು ಸಹಕಾರಿ ಸಂಸ್ಥೆಗೆ ಗುತ್ತಿಗೆ ನೀಡಿರುವುದರಿಂದ ಅಲ್ಲಿನ ಸ್ಥಳೀಯ ಮೀನುಗಾರರಿಗೆ, ಸ್ಥಳೀಯ ಭಜನಾ ಮಂದಿರದವರಿಗೆ ಹಾಗೂ ಪ್ರವಾಸಿಗರಿಗೆ ಮುಂಬರುವ ದಿನಗಳಲ್ಲಿ ಬಹಳಷ್ಟು ತೊಂದರೆಯಾಗಲಿದೆ. ಈ ಪ್ರಕರಣದ ಬಗ್ಗೆ ವಿಶೇಷ ಗಮನಹರಿಸಿ ಸದ್ರಿ ಸರಕಾರಿ ಜಾಗದ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಿ ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಹೆಬ್ಬಾರ್, ಮಾಜಿ ನಗರಸಭಾ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯೆ ಆಶಾ ಚಂದ್ರಶೇಖರ್, ಕಡೆಕಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವೀನ್ ಶೆಟ್ಟಿ, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ್ ಪೂಜಾರಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಸುಕೇಶ್ ಕುಂದರ್, ಸತೀಶ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಮಂಚಿ, ಕಾಂಗ್ರೆಸ್ ಯುವ ಮುಖಂಡರಾದ ಹಮ್ಮದ್ ಹಾಗೂ ಸಂಜಯ್ ಆಚಾರ್ಯ, ಕಾಂಗ್ರೆಸ್ ಮುಖಂಡರಾದ ಜಯವೀರ್ ಫೆಡ್ರಿಕ್ಸ್ ಹಾಗೂ ಶಿಲ್ಪಾ ಅವರು ಉಪಸ್ಥಿತರಿದ್ದರು



