ಉಡುಪಿ : ಆರೆಸ್ಸೆಸ್ ದೇಶದಲ್ಲಿ ಜಾತಿ–ಧರ್ಮದ ಹೆಸರಲ್ಲಿ ಕಲಹ ಉಂಟುಮಾಡಿ ಸಮಾಜದಲ್ಲಿ ವೈಮನಸ್ಸು ಸೃಷ್ಟಿಸುತ್ತಿದೆ ಅದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ಜಿಲ್ಲಾ ಘಟಕದ ವತಿಯಿಂದ ಶನಿವಾರ ಮಣಿಪಾಲ ಜಿಲ್ಲಾಡಳಿತ ಕಚೇರಿ ಮುಂದೆ ಭಾರೀ ಪ್ರತಿಭಟನೆ ನಡೆಯಿತು.

ಜಿಲ್ಲಾ ಸಂಚಾಲಕ ಮಂಜುನಾಥ ಗಿಳಿಯಾರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಆರೆಸ್ಸೆಸ್ ದೇಶದಲ್ಲಿ ಬೇರೂರಿ ನೂರು ವರ್ಷ ಕಳೆದಿವೆ. ಈ ನೂರು ವರ್ಷಗಳಲ್ಲಿ ಸಂಘವು ಸಮಾಜದಲ್ಲಿ ಸಾಮರಸ್ಯವನ್ನು ಕೆಡಿಸಿ, ಮುಸ್ಲಿಂ ಹಾಗೂ ದಲಿತ ಸಮುದಾಯದ ವಿರುದ್ಧ ದ್ವೇಷದ ವಾತಾವರಣವನ್ನು ನಿರ್ಮಿಸಿದೆ. ದಲಿತರಿಗೆ ಮೀಸಲಾತಿ ಇದೆ, ಮೇಲ್ವರ್ಗದವರಿಗೆ ಇಲ್ಲ ಎಂಬ ಸುಳ್ಳುಪ್ರಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಕೋಟ್ಯಂತರ ಹಣ ಖರ್ಚು ಮಾಡಿ ಹಬ್ಬಿಸುತ್ತಿದೆ. ಪ್ರತಿ ಗಂಟೆಗೆ ಅತ್ಯಾಚಾರ, ಕೊಲೆಗಳು ನಡೆಯುತ್ತಿವೆ. ಅಸಮಾನತೆ ಹೆಚ್ಚುತ್ತಿದೆ. ಆದರೆ ಆರೆಸ್ಸೆಸ್ ಇವುಗಳ ಬಗ್ಗೆ ಮಾತಾಡುವುದಿಲ್ಲ. ಬದಲಿಗೆ ಹಿಂದೂ–ಮುಸ್ಲಿಂ ದ್ವೇಷವನ್ನು ಉಸಿರಾಡಿಸಿ ಅಧಿಕಾರ ಮತ್ತು ಸಂಪತ್ತನ್ನು ಕೇಂದ್ರೀಕರಿಸುತ್ತಿದೆ. ಇಂತಹ ಸಂವಿಧಾನ–ಪ್ರಜಾಪ್ರಭುತ್ವ ವಿರೋಧಿ ಸಂಘಟನೆ ನಿಷೇಧವಾಗಲೇಬೇಕು, ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸುಂದರ್ ಮಾಸ್ತರ್, ಫಣಿರಾಜ್, ಶ್ಯಾಮರಾಜ್ ಭಿರ್ತಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಇವರ ಮೂಲಕ ರಾಜ್ಯ ಸರ್ಕಾರಕ್ಕೆ ಆರೆಸ್ಸೆಸ್ ನಿಷೇಧಿಸಬೇಕು ಎಂಬ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



