ಉಡುಪಿ : ನಾರಾಯಣಗೌಡ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವಾರ್ಷಿಕ ಸಭೆ ಮತ್ತು ಪದಾಧಿಕಾರಿಗಳ ಆಯ್ಕೆ ಉಡುಪಿ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರವೇ ಜಿಲ್ಲಾ ಅಧ್ಯಕ್ಷ ಪ್ರಭಾಕರ್ ಪೂಜಾರಿ ನೆರವೇರಿಸಿದರು. ಬಳಿಕ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಸುಧೀಶ್ ಶೇಟ್, ನಗರ ಅಧ್ಯಕ್ಷ ಅಜರುದ್ದೀನ್, ಜಿಲ್ಲಾ ಸಂಚಾಲಕ ಸಂದೀಪ್ ಪೂಜಾರಿ ಮತ್ತು ಕಾರ್ಯದರ್ಶಿಯಾಗಿ ಪ್ರಶಾಂತ್ ದೇವಾಡಿಗ (ಬಾರ್ಕೂರು) ಆಯ್ಕೆಯಾದರು. ಸಭೆಯ ವೇಳೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ನೂತನ ಪ್ರಧಾನ ಕಾರ್ಯದರ್ಶಿ ಸುಧೀಶ್ ಶೇಟ್ ಮಾತನಾಡಿ, ಉಡುಪಿ ಕರವೇ ಸಂಘಟನೆಯಲ್ಲಿ ಯುವಕರಿಗೆ ಹೆಚ್ಚಿನ ಅವಕಾಶ ನೀಡಬೇಕು. ಕನ್ನಡದ ಹಿತಾಸಕ್ತಿಗಾಗಿ ಯುವಕರು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಬೇಕು. ಸಂಘಟನೆಯನ್ನು ಬಲಿಷ್ಠಗೊಳಿಸಲು ಶ್ರಮಿಸುತ್ತೇನೆ ಎಂದರು.

ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ ಮಾತನಾಡಿ, ಉಡುಪಿಯಲ್ಲೂ ನಾಡು, ನೆಲ, ಜಲ, ಭಾಷೆ ಉಳಿವಿಗಾಗಿ ಹೋರಾಟದ ಅಗತ್ಯವಿದೆ. ಕಾರ್ಯಕರ್ತರು ಧೈರ್ಯದಿಂದ ಸಂಘಟನೆಯ ಬಲವನ್ನು ಹೆಚ್ಚಿಸಬೇಕು. ಯಾವುದೇ ಸವಾಲು ಎದುರಾದರೂ ಕರವೇ ಕಾರ್ಯಕರ್ತರ ಬೆನ್ನೆಲುಬಾಗಿ ನಿಂತುಕೊಳ್ಳುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಗೀತಾ ಪಾಂಗಾಳ, ಗೌರವಾಧ್ಯಕ್ಷ ಗೋಪಾಲ್ ಮೆಂಡನ್, ಕಾಪು ತಾಲೂಕು ಅಧ್ಯಕ್ಷ ವೀರೇಶ್ ಟಿ.ಕೆ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಮಹಿಳಾ ಅಧ್ಯಕ್ಷೆ ಶಶಿಕಲಾ ಪೂಜಾರಿ, ಅಶ್ವಿನಿ ನಾಯಕ್, ಜಯಶ್ರೀ ಸುವರ್ಣ, ಗೀತಾ ಸುಜಾತ ಪೂಜಾರ್ತಿ, ವಿದ್ಯಾರ್ಥಿ ಘಟಕದ ನಾಯಕಿ ಪ್ರಿಯಾಂಕಾ, ಜಿಲ್ಲಾ ಮುಖಂಡರು ಪ್ರಸಾದ್ ಪೂಜಾರಿ, ಮೋಹಿನಿ ಹಾಗೂ ಗಣೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.



