ಉಡುಪಿ : ಬಿಜೆಪಿ ಮಾಜಿ ಸಚಿವ ಸಿ.ಟಿ. ರವಿ ಅವರು ಸವಿತಾ ಸಮಾಜದ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅವರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ತಿಮ್ಮ ಪೂಜಾರಿ ಆಗ್ರಹಿಸಿದ್ದಾರೆ.

ಅವರು ಶನಿವಾರ ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸವಿತಾ ಸಮಾಜವು ಧರ್ಮ-ಜಾತಿ ಬೇಧವಿಲ್ಲದೆ ಎಲ್ಲರಿಗೂ ಗೌರವಪೂರ್ವಕವಾಗಿ ಕ್ಷೌರ ಸೇವೆ ನೀಡುವ ಶ್ರಮಜೀವಿ ವರ್ಗವಾಗಿದೆ. ಇಂತಹ ಸಮಾಜದ ವಿರುದ್ಧ ಸಿ.ಟಿ. ರವಿ ಅವರು ಸಾರ್ವಜನಿಕ ವೇದಿಕೆಯಲ್ಲಿ ನೀಡಿದ ಅಸಂಸ್ಕೃತ ಹೇಳಿಕೆ, ಸಮಾಜದ ಗೌರವಕ್ಕೆ ಧಕ್ಕೆ ತಂದಿದೆ ಎಂದರು.

ಕ್ಷೌರಿಕ ವೃತ್ತಿ ಪೌರಾಣಿಕ ಮತ್ತು ಸನಾತನ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿದೆ. ದೇವಾಲಯಗಳಲ್ಲಿ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಈ ವೃತ್ತಿಯು ಗೌರವಪೂರ್ವಕ ಸೇವೆಯಾಗಿ ಪರಿಗಣಿತವಾಗಿದೆ. ಇಂತಹ ಪವಿತ್ರ ವೃತ್ತಿಯನ್ನು ಹಾಸ್ಯಾಸ್ಪದವಾಗಿ ಚಿತ್ರಿಸುವುದು ನಿಂದನೀಯ ಹಾಗೂ ಅಸಭ್ಯ ನಡವಳಿಕೆಯಾಗಿದೆ. ಸಿ.ಟಿ. ರವಿ ಅವರು ತಕ್ಷಣವೇ ಬಹಿರಂಗವಾಗಿ ಕ್ಷಮೆಯಾಚನೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ, ಜಿಲ್ಲಾ ಕಾಂಗ್ರೆಸ್ ಮುಖಂಡರು ಗೋಪಾಲ್ ಬಂಗೇರ, ಚಂದ್ರ ಪೂಜಾರಿ, ಮಹಾಬಲ ಮಡಿವಾಳ, ಅಚ್ಚುತ ಪೂಜಾರಿ ಕಾರ್ಕಡ, ಶೇಖರ ಮರಕಾಲ, ದಿನೇಶ್ ಬಂಗೇರ, ವಿಜಯ್ ಪೂಜಾರಿ ಮತ್ತು ಇತರರು ಉಪಸ್ಥಿತರಿದ್ದರು.



