ಡಲ್ಲಾಸ್: ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಡಲ್ಲಾಸ್ನ ಶ್ರೀ ಪುತ್ತಿಗೆ ಶಾಖಾ ಮಠ ಶ್ರೀ ಕೃಷ್ಣ ವೃಂದಾವನದಲ್ಲಿ ಲೋಕಕಲ್ಯಾಣಾರ್ಥ ಶನೈಶ್ಚರ ಹೋಮ ವೈಭವದಿಂದ ಜರಗಿತು.

ಈ ಹೋಮವು ಭಕ್ತಜನರ ಜ್ಞಾನ, ಆರೋಗ್ಯ, ಉದ್ಯೋಗ, ಕ್ಷೇಮ ಮತ್ತು ವಿದ್ಯಾಪ್ರಾಪ್ತಿಗಾಗಿ ಆಯೋಜಿಸಲಾಗಿತ್ತು. ಅಕ್ಟೋಬರ್ 25ರಂದು, ಪಂಚದುರ್ಗಾ ಪೂಜೆ, ೧೦೮ ಮಹಿಳೆಯರಿಂದ ಲಕ್ಷ್ಮೀ ಸಹಸ್ರನಾಮಾವಳಿ ಕುಂಕುಮಾರ್ಚನೆ, ೧೦೮ ಬರಿ ಲಕ್ಷ್ಮೀ ಶೋಭಾನೆ ಮತ್ತು ತುಳಸಿ ಸಂಕೀರ್ತನೆಗಳು ಭಕ್ತಿಭಾವದಿಂದ ನೆರವೇರಿದವು.

ಅಕ್ಟೋಬರ್ 26ರಂದು, ಅರಣಿಮಥನದೊಂದಿಗೆ ಅಗ್ನಿ ಜ್ವಲನ ನಡೆಸಿ, ಮುಹೂರ್ತದ ವೇಳೆಗೆ ಹೋಮಾರಂಭ ನಡೆಯಿತು. ೧೯,೦೦೦ ಶನಿ ಜಪದೊಂದಿಗೆ ಶನೈಶ್ಚರ ಶಾಂತಿ, ಸಂಜೀವಿನಿ ಮೃತ್ಯುಂಜಯ ಹೋಮ, ದ್ವಾದಶ ನಾರಿಕೇಳ ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಲಕ್ಷ್ಮೀ ಹೃದಯ ಹೋಮಗಳು ವೈದಿಕ ಶೈಲಿಯಲ್ಲಿ ನೆರವೇರಿಸಲ್ಪಟ್ಟವು.

ಕಾರ್ಯಕ್ರಮವನ್ನು ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಹೋಮದ ವಿಧಿಗಳನ್ನು ವಾದಿರಾಜ ಭಟ್ ಕುಕ್ಕೆಹಳ್ಳಿ (ಡಲ್ಲಾಸ್), ರಘುರಾಮ ಭಟ್ (ಹೂಸ್ಟನ್), ಶ್ರೀಪತಿ ತಂತ್ರಿ (ಸಿಯಾಟಲ್), ವೇದವ್ಯಾಸ ಭಟ್ ಹೆರ್ಗ (ಸಿಯಾಟಲ್), ಅವಿನಾಶ್ ಆಚಾರ್ಯ (ಆಸ್ಟಿನ್) ಹಾಗೂ ಉದಯಕುಮಾರ್ ಕಲ್ಲೂರಾಯ (ಫೀನಿಕ್ಸ್) ಅವರ ನೇತೃತ್ವದಲ್ಲಿ ಶಿಸ್ತಿನೊಂದಿಗೆ ನೆರವೇರಿಸಲಾಯಿತು. ಸ್ಥಳೀಯ ಸ್ವಯಂಸೇವಕರ ಸಹಕಾರದೊಂದಿಗೆ ಹರೀಶ್ ಭಟ್ ಡಲ್ಲಾಸ್ ಅವರ ಉಡುಪಿ ಶೈಲಿಯ ಅಡುಗೆಯು ಭಕ್ತರನ್ನು ಸಂತೃಪ್ತಿಗೊಳಿಸಿತು. ಈ ಪೂಜೆ ಮತ್ತು ಹೋಮಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಧನ್ಯರಾದರು.



