ಉಡುಪಿ : ದತ್ತು ಕೇಂದ್ರದಿಂದ ನಾಪತ್ತೆಯಾಗಿದ್ದ ವಿಶೇಷ ಚೇತನ ಬಾಲಕ 14ವರ್ಷಗಳ ಬಳಿಕ ಉಡುಪಿ ಪೊಲೀಸರ ವಿಶೇಷ ತಂಡ ಪತ್ತೆ ಹಚ್ಚಿದ ಘಟನೆ ನಡೆದಿದೆ. ಉಡುಪಿ ಸಂತೆಕಟ್ಟೆಯಲ್ಲಿರುವ ಶ್ರೀಕೃಷ್ಣಾನುಗ್ರಹ ದತ್ತು ಸ್ವಿಕಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದ ಸಂತೋಷ (12) ಪತ್ತೆಯಾದ ಬಾಲಕ.

ಈತ 2011ರ ಫೆ.23ರಂದು ರಾತ್ರಿ ಶ್ರೀಕೃಷ್ಣಾನುಗ್ರಹ ದತ್ತು ಸ್ವಿಕಾರ ಕೇಂದ್ರದಿಂದ ನಾಪತ್ತೆಯಾಗಿದ್ದ, ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕನ ಪತ್ತೆಗಾಗಿ ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಕಾರ್ಕಳದ ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲಿ 2018ರಿಂದ ಆಶ್ರಯ ಪಡೆದಿರುವ ಬಿಪಿನ್ ಎಂಬ ಹೆಸರಿನ ಹುಡುಗ, ನಾಪತ್ತೆಯಾಗಿದ್ದ ಸಂತೋಷನಿಗೆ ಹೋಲಿಕೆ ಯಾಗುತ್ತಿರುವುದು ಕಂಡುಬಂದಿದೆ. ಕಾಣೆಯಾದ ಬಾಲಕ ಮುಖ ಚಹರೆ, ಈಗಿನ ಅಂದಾಜು ಪ್ರಾಯ, ಕುಳಿತು ಕೊಳ್ಳುವ ಭಂಗಿ, ಸಂಪೂರ್ಣ ಚಲನವಲನದ ಬಗ್ಗೆ ಖಚಿತಪಡೆಸಿಕೊಂಡು, ದೂರುದಾರೆ ಮೆರಿನಾ ಎಲಿಜಬೆತ್ ಹಾಗೂ ಸಂತೋಷ ಕಾಣೆಯಾದ ಸಮಯದಲ್ಲಿ ಆ ಸಂಸ್ಥೆನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಸಿಬ್ಬಂದಿ ಶಾಂತಿ ಜೊತೆಯಾಗಿ ವಿಜೇತ ವಿಶೇಷ ಮಕ್ಕಳ ಶಾಲೆಗೆ ತೆರಳಿ ನೋಡಿದಾಗ ಕಾಣೆಯಾದ ಬಾಲಕ ಈತನೆ ಎನ್ನುವುದು ದೃಢವಾಗಿದೆ.

ಸದ್ಯ ಆತನ ಪೋಷಕರ ಪತ್ತೆ ಕಾರ್ಯ ನಡೆಸಲಾಗುತ್ತಿದೆ, ಸಂತೋಷ ಬುದ್ದಿ ಮಾಂಧ್ಯನಾಗಿರುವ ಹಿನ್ನಲೆಯಲ್ಲಿ ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲಿಯೇ ಪಾಲನೆ ಮಾಡುವ ಬಗ್ಗೆ ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನೀಡಿದ ಸಲಹೆಯಂತೆ ಅಲ್ಲಿಯೇ ಇರಿಸಲಾಗಿದೆ. ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಎಸ್ಸೈಗಳಾದ ಸುದರ್ಶನ ದೊಡಮನಿ, ಈರಣ್ಣ ಶಿರಗುಂಪಿ, ಸಿಬ್ಬಂದಿ ಇಮ್ರಾನ್, ಚೇತನ್, ಸಂತೋಷ ದೇವಾಡಿಗ, ಮಲ್ಲಯ್ಯ ಹಿರೇಮಠ ಈ ಕಾರ್ಯಾಚರಣೆ ನಡೆಸಿದ್ದರು.


