ಉಡುಪಿ: ಅಕ್ರಮವಾಗಿ ದನ ಸಾಗಟ ಮಾಡುವಾಗ ಖಾಸಗಿ ವಾಹನಗಳಿಗೆ ಢಿಕ್ಕಿ ಹೊಡೆದಿರುವುದಲ್ಲದೇ, ಪೊಲೀಸ್ ವಾಹನಕ್ಕೂ ಹಾನಿ ಮಾಡಿ ಪರಾರಿಯಾದ ದನಗಳ್ಳರಲ್ಲಿ ಓರ್ವನನ್ನು ಪೊಲೀಸ್ ಬಂಧಿಸಿದ್ದಾರೆ. ಸುರತ್ಕಲ್ ನ ಮೊಹಮ್ಮದ್ ಶಾರೋಜ್ ಬಂಧಿತ ಆರೋಪಿ. ಅಜೀಮ್ ಕಾಪು, ಸಫ್ವಾನ್ ಕಾಪು, ರಾಜಿಕ್ ಬಜ್ಪೆ ಪರಾರಿಯಾದವರು.

ಆರೋಪಿಗಳು ಐದಾರು ಜಾನುವಾರಗಳನ್ನು ಕಳವು ಮಾಡಿ ಕಾರಿನಲ್ಲಿ ಮಾಂಸಕ್ಕಾಗಿ ತುಂಬಿಕೊಂಡು ಹೋಗುತ್ತಿರುವ ಕುರಿತು ಗಂಗೊಳ್ಳಿ ಪೊಲೀಸ್ ರಿಗೆ ಮಾಹಿತಿ ಬಂದಿತ್ತು. ತಕ್ಷಣ ಕಾರ್ಯ ಪ್ರವೃತ್ತರಾದ ಗಂಗೊಳ್ಳಿ ಠಾಣೆಯ ಪಿ.ಎಸ್.ಐ ಪವನ್ ನಾಯಕ್ ಅವರು ಖಾಸಗಿ ವಾಹನದಲ್ಲಿ ರಾತ್ರಿ ಸಿಬ್ಬಂದಿಯವರ ಜೊತೆಯಲ್ಲಿ, ಪ್ರಕರಣದಲ್ಲಿ ಸಂಶಯಿತ ಆರೋಪಿಗಳು ಉಡುಪಿ ಕಡೆಗೆ ದನ ಕಳವು ಮಾಡಲು ಕಾಫಿ ಬಣ್ಣದ ಪಾರ್ಚುನರ್ ಕಾರಿನಲ್ಲಿ ಬಂದಿರುತ್ತಾರೆ ಎಂಬುದಾಗಿ ಖಚಿತ ಮಾಹಿತಿಯಂತೆ ಹುಡುಕಾಟ ನಡೆಸಿದ್ದಾರೆ. ಬಳಿಕ ಆಗಸ್ಟ್ ೫ರ ಮುಂಜಾನೆ ಹೆಜಮಾಡಿ ಟೋಲ್ ಸಮೀಪ ದನಕಳ್ಳರ ಕಾರು ಕಂಡ ತಕ್ಷಣ ತಡೆದು ನಿಲ್ಲಿಸಲು ಯತ್ನಿಸಿದಾಗ, ಆರೋಪಿಗಳು ಪೊಲೀಸರ ಮೇಲೆ ಕಾರು ಹಾಯಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ.

ಈ ಘಟನೆಯಲ್ಲಿ ಗಂಗೊಳ್ಳಿ ಎಸ್ಐ ಬಸವರಾಜ ಕಣಶೆಟ್ಟಿ ಹಾಗೂ ಸಿಬ್ಬಂದಿ ಸಂದೀಪ್ ಎಂಬವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕೆಲವು ವಾಹನಗಳಿಗೆ ಹಾನಿಯಾಗಿದ್ದು, ಕಾರಿನ ಚಾಲಕ ಶರೋಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರು ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಬಳಿಕ ಕಾರನ್ನು ಉಳ್ಳಾಲದಲ್ಲಿ ದನ ಸಹಿತ ಬಿಟ್ಟು ಓಡಿ ಹೋಗಿದ್ದಾರೆ. ಬಳಿಕ ಪೊಲೀಸರು ಕಾರು ಮತ್ತು ಕಾರಿನಲ್ಲಿದ್ದ ದನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



