ಬ್ರಹ್ಮಾವರ: ಮಾತೃ ಭಾಷೆಯಲ್ಲಿ ನೀಡುವ ಮೌಲ್ಯಯುತ ಶಿಕ್ಷಣದಿಂದ ಮಾತ್ರ ಮಕ್ಕಳ ಸರ್ವತೋಮುಖವಾದ ಬೌದ್ಧಿಕ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿಇಂದು ಕನ್ನಡ ಮಾದ್ಯಮ ಅನುದಾನಿತ ಹಾಗೂ ಸರಕಾರಿ ಶಾಲೆಗಳು ಶ್ರೇಷ್ಟವಾದ ಶಿಕ್ಷಣ ಸೇವೆಯನ್ನು ಒದಗಿಸುತ್ತಿವೆ. ಶಿಕ್ಷಕರ ಕೊರತೆ ಇರುವುದು ಸತ್ಯ. ಇಲಾಖೆ ಸಾಧ್ಯವಾದಷ್ಟು ಮಟ್ಟಿಗೆ ತನ್ನ ಇತಿಮಿತಿಯೊಳಗೆ ಶಿಕ್ಷಕರನ್ನು ಹೊಂದಿಸಿಕೊಡುವ ಕೆಲಸ ಮಾಡುತ್ತಿದೆ. ವಿಶ್ವಕೀರ್ತಿಯಂತಹ ಶತಮಾನ ಕಂಡ ಶಾಲೆಗೆ ಅದರ ಹಳೆವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಒಮ್ಮನಸ್ಸಿನಿಂದ ಬೆಂಬಲ ನೀಡಿದರೆ ಇಂತಹ ಶಾಲೆಗಳ ಶಿಕ್ಷಣ ಸೇವೆ ನಿರಾತಂಕವಾಗಿ ಸಾಗುತ್ತದೆ. ಈ ದಿಸೆಯಲ್ಲಿ ಈ ಶಾಲೆಯ ಅಭಿಮಾನಿಗಳ ಪ್ರೋತ್ಸಾಹ ಪ್ರಶಂಸನೀಯ ಎಂಬುದಾಗಿ ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶಬಾನ ಅಂಜುಮ್ ತಿಳಿಸಿದರು.

ಅವರು ಶತಮಾನದ ಇತಿಹಾಸವನ್ನು ಹೊಂದಿರುವ ಕುಂಜಾಲು ವಿಶ್ವಕೀರ್ತಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶೈಕ್ಷಣಿಕ ವರ್ಷದ ಆರಂಭೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶಾಲಾ ಮಕ್ಕಳಿಗೆ ಪೆನ್ ನೀಡಿ ಸ್ವಾಗತಿಸಿ, ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ ಶ್ರಿಮತಿ ಬೇಬಿ ಸಾಲಿಯಾನ್ ಮತ್ತು ಸಂತೋಷ ಪೂಜಾರಿ ಸೋದರಿ- ಸೋದರರಿಗೆ ಶಾಲೆಯ ವತಿಯಿಂದ ಕೃತಜ್ಞತೆಯ ಗೌರವ ಸಲ್ಲಿಸಿ ಮಾತನಾಡಿದರು. ಅತಿಥಿಗಳೆಲ್ಲರೂ ಸೇರಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರೂರು ನೀಲಮ್ಮ ಶೆಡ್ತಿ ಚಾರಿಟೇಬಲ್ ಟೃಸ್ಟ್ನ ಟೃಷ್ಟಿ ಆರೂರು ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ, ಕುಂಜಾಲು ವಿಶ್ವಕೀರ್ತಿಯಂತಹ ಐತಿಹಾಸಿಕ ಅನುದಾನಿತ ಶಿಕ್ಷಣ ಸಂಸ್ಥೆಗಳ ನೈಜವಾದ ಶಿಕ್ಷಣ ಕಾಳಜಿಯನ್ನು ಗುರುತಿಸಿ ಶಾಲೆಯನ್ನು ಉಳಿಸಿ ಬೆಳೆಸುವುದು ಇಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಎಂಬುದಾಗಿ ಭಾವಿಸಿ ಮುಂದೆ ಬಂದು ಬಾಹ್ಯ ಬೆಂಬಲವನ್ನು ನೀಡಿದಾಗ ಮಾತ್ರ ಸಾಧ್ಯವಾಗುತ್ತದೆ. ಈ ನೆಲೆಯಲ್ಲಿ ನೂತನ ನಿರ್ವಹಣಾ ಸಮಿತಿಯ ಕಾರ್ಯಚಟುವಟಿಕೆ ಹಾಗೂ ಸಂಘಟನಾತ್ಮಕ ಕಾರ್ಯತತ್ಪರತೆ ಶ್ಲಾಘನೀಯ ಎಂದು ತಿಳಿಸಿದರು.

ಶಾಲೆಗೆ ಉಚಿತ ಪೈಂಟ್ ನೀಡಿ ಪೈಟಿಂಗ್ ಕೆಲಸವನ್ನು ನಿರ್ವಹಿಸಿದ ಸುರೇಶ್ ಕೊಡವೂರು, ಸ್ವಯಂ ಸೇವಕ ರಾಜೇಶ ದೇವಾಡಿಗ, ಸ್ವಚತಾ ಸೇವೆಯನ್ನು ಸಲ್ಲಿಸಿದ ಹರ್ಷಿತ್ ಮತ್ತು ಬಳಗ, ನಾಗೇಶ ನಾಯ್ಕ್, ಪ್ರಸಾದ್ ಆರೂರು, ಶೈಲಾ ಆರ್ ನಾಯಕ್, ಜ್ಯೋತಿ ಭಟ್ ಮತ್ತು ಶಾಲೆಯ ದಾನಿಗಳನ್ನು ಶಾಲೆಯ ಪರವಾಗಿ ಗೌರವಿಸಲಾಯಿತು. ಸಭಾಧ್ಯಕ್ಷತೆಯನ್ನು ವಹಿಸಿದ ನೀಲಾವರ ಮಹಿಷಮರ್ದಿನಿ ದೇವಸ್ಥಾನದ ಧರ್ಮದರ್ಶಿ ರಘುರಾಮ ಮಧ್ಯಸ್ಥ ಮಾತನಾಡಿ, ಸಮಾಜದ ಪ್ರತಿಯೊಂದೂ ಮಗುವೂ ಶಿಕ್ಷಣದಿಂದ ವಂಚಿರಾಗಬಾರದು, ಮಾತೃಭಾಷೆ ಕನ್ನಡ ಉಳಿಯಬೇಕು ಎಂಬುದು ಸರಕಾರದ ಘೋಷಣೆಯಾಗಿಯೇ ಉಳಿದಿರುವುದು ದುರಾದೃಷ್ಠಕರ. ಸರಿಯಾದ ಶಿಕ್ಷಕರ ಆಯೋಜನೆಯಿಲ್ಲದೆ ಇಂದು ಅನೇಕ ಅನುದಾನಿತ ಶಿಕ್ಷಣ ಸಂಸ್ಥೆಗಳು ಮುಚ್ಚಿವೆ ಮತ್ತು ಹಲವು ಮುಚ್ಚುವ ಭೀತಿಯಲ್ಲಿವೆ. ಹೀಗಾದಲ್ಲಿ ಸಮಾಜದ ಅತೀ ಬಡ ವಿದ್ಯಾರ್ಥಿಗಳು ಶಿಕ್ಷಣವಂಚಿರಾಗುವುದು ಶತಃಸಿದ್ಧ. ಇಲಾಖೆ ಈ ಬಗ್ಗೆ ಗಮನಹರಿಸಲೇ ಬೇಕಾಗಿದೆ. ಶತಮಾನ ಕಂಡ ವಿಶ್ವಕೀರ್ತಿ ಹಿರಿಯಪ್ರಾಥಮಿಕ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಸಹಕಾರದ ಜೊತೆಗೆ ಸಾರ್ವಜನಿಕರು ಕೈಜೊಡಿಸಿದರೆ ಮಾತ್ರ ಸಮಾಜದ ಕಟ್ಟ ಕಡೆಯ ಮಗುವೂ ಶಿಕ್ಷಣ ಸೌಲಭ್ಯವನ್ನು ಪಡೆಯುವುದು ಸಾಧ್ಯ ಎಂಬುದಾಗಿ ಅಭಿಪ್ರಾಯಪಟ್ಟರು.
ನೂತನ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಬಾಸ್ರಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಶಾಲೆಯ ಎದುರಿರುವ ಸವಾಲುಗಳನ್ನು ವಿವರಿಸಿ ಹಾಗು ನೂತನ ಸಮಿತಿಯು ಸಮಾಜದ ಕಟ್ಟಕಡೆಯ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಕಾಳಜಿಯೊಂದಿಗೆ ವಿವಿಧ ಸೌಲಭ್ಯಗಳಿಂದೊಡಗೂಡಿದ ಗುಣಮಟ್ಟದ ಉಚಿತವಾದ ಶಿಕ್ಷಣವನ್ನು ನೀಡುವಲ್ಲಿ ತನ್ನ ಬದ್ಧತೆ ಮತ್ತು ಸಿದ್ಧತೆಯನ್ನು ದೃಢಪಡಿಸಿದರು. ಶಾಲಾಭಿಮಾನಿ ರವೀಂದ್ರರಾವ್ ನೀಡಲಿರುವ ಶಾಲಾ ಬ್ಯಾಗನ್ನು ಸಾಂಕೇತಿಕವಾಗಿ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿ ಮಾತನಾಡಿದ ನೀಲಾವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೀಮತಿ ಗೀತಾ ಬಾಳಿಗರವರು ಮುಚ್ಚುವ ಭೀತಿಯಲ್ಲಿದ್ದ ಕುಂಜಾಲು ವಿಶ್ವಕೀರ್ತಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳುವಲ್ಲಿ ಗ್ರಾಮ ಪಂಚಾಯತ್ ವಹಿಸಿದ ಪಾತ್ರ ಮತ್ತು ಕಾಳಜಿಯನ್ನು ವಿವರಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಶುಭಾಶಂಸನೆಗೈದರು.
ಶಾಲಾ ಮುಖ್ಯೋಪಾಧ್ಯಾಯರಾದ ಬಾಲಚಂದ್ರ ಶೆಟ್ಟಿ ಸ್ವಾಗತಿಸಿದರು. ಹಳೆವಿದ್ಯಾರ್ಥಿ ರಾಜೇಶ ದೇವಾಡಿಗ ವಂದಿಸಿದರು. ಆಗಮಿಸಿದ ಎಲ್ಲಾ ಹಳೆವಿದ್ಯಾರ್ಥಿಗಳು ಮತ್ತು ದಾನಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕ ಧನಂಜಯ ಅಮೀನ್, ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗುರುರಾಜ್ ರಾವ್, ನೀಲಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ರಮೇಶ ಪೂಜಾರಿ, ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್, ನಿವೃತ್ತ ಶಿಕ್ಷಕ ಪಾಂಡುರಂಗ ನಾಯ್ಕ್, ನಿರ್ವಹಣಾ ಸಮಿತಿಯ ಕೋಶಾಧ್ಯಕ್ಷ ಕೆ ಟಿ ನಾಯ್ಕ್ ಉಪಸ್ಥಿತರಿದ್ದರು.