ಉಡುಪಿ : ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಸ್ಥಾಪಿಸಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡ ರಾಷ್ಟ್ರೀಯ ಕಲಾ ಸಮ್ಮೇಳನ ಭಾನುವಾರ ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹಾಗೂ ವಿವಿಧ ದಾನಿಗಳ ಉಪಸ್ಥಿತಿಯಲ್ಲಿ ಫೌಂಡೇಶನ್ಗೆ ದೊಡ್ಡಮೊತ್ತವನ್ನು ನೀಡಿ ಸಹಕರಿಸಿದ ಐಕಳ ಹರೀಶ್ ಶೆಟ್ಟಿ ಅವರನ್ನು ಪತ್ನಿ ಚಂದ್ರಿಕಾ ಶೆಟ್ಟಿ ಸಮೇತ ‘ಯಕ್ಷಧ್ರುವ ಮಹಾಪೋಷಕ ‘ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಹಾಗೂ ಅಧ್ಯಕ್ಷತೆಯನ್ನು ವಹಿಸಿದ್ದ ಎಂಆರ್ಜಿ ಗ್ರೂಫ್ನ ಎಂಡಿ ಡಾ.ಕೆ.ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು, ಯಕ್ಷಗಾನ ಕಲಾವಿದರು ರಂಗಸ್ಥಳದ ಅಭಿನಯದಿಂದ ಮನೋರಂಜನೆ ಪಡೆದ ನಾವು ಕಲಾವಿದರ ನೈಜ ಬದುಕಿನ ನೋವು ನಲಿವುಗಳನ್ನು ಗಮನಿಸೋದಿಲ್ಲ. ಇಂತಹ ಸಂದರ್ಭದಲ್ಲಿ ತನ್ನಂತಹ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ತನ್ನ ಟ್ರಸ್ಟ್ ಮೂಲಕ ದಾನಿಗಳ ನೆರವು ಪಡೆದು ಸಾರ್ಥಕ ಸೇವಾ ಕಾರ್ಯಕ್ರಮಗಳನ್ನು ಭಾಗವತ ಸತೀಶ್ ಪಟ್ಲ ನಡೆಸುತ್ತಿದ್ದಾರೆ. ಒಂದು ಕಡೆ ಸರಸ್ವತಿ ಪುತ್ರರು ಹಾಗೂ ಮತ್ತೊಂದೆಡೆ ಲಕ್ಶ್ಮೀ ಪುತ್ರರನ್ನು ಒಗ್ಗೂಡಿಸಿರುವ ಸತೀಶ್ ಪಟ್ಲ ಅವರ ಕಾರ್ಯ ಶ್ಲಾಘನೀಯ. ಅವರ ಫೌಂಡೇಶನ್ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ನಡೆಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಮೋಹನ್ದಾಸ ಸ್ವಾಮೀಜಿ, ಫೌಂಡೇಶನ್ನ ಮಹಾದಾನಿಗಳಾದ ಶಶಿಧರ ಶೆಟ್ಟಿ ಬರೋಡಾ, ಕೆ.ಡಿ.ಶೆಟ್ಟಿ, ಕೆ.ಎಂ.ಶೆಟ್ಟಿ, ದಯಾನoದ ಶೆಟ್ಟಿ ಆಸ್ಟ್ರೇಲಿಯಾ, ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಸರ್ವೋತ್ತಮ ಶೆಟ್ಟಿ ದುಬಾಯಿ, ಶಾಸಕ ಹರೀಶ್ ಪೂಂಜಾ, ಪ್ರವೀಣ್ ಭೋಜ ಶೆಟ್ಟಿ, ವೇಣುಗೋಪಾಲ ಶೆಟ್ಟಿ, ಬೆಳ್ಳಾರೆ ಅಶೋಕ್ ಶೆಟ್ಟಿ, ರವೀಂದ್ರನಾಥ ಭಂಡಾರಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಶಶಿಧರ ಶೆಟ್ಟಿ, ಗಿರೀಶ್ ಶೆಟ್ಟಿ, ಮೋಹನ್ದಾಸ್ ಶೆಟ್ಟಿ, ಕದ್ರಿ ನವನೀತ್ ಶೆಟ್ಟಿ, ವಸಂತ ಶೆಟ್ಟಿ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರವರ್ತಕ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿ, ಪಾಸ್ತಾವಿಕ ಮಾತುಗಳನ್ನಾಡಿದರು. ಕದ್ರಿ ನವನೀತ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.