ಉಡುಪಿ : ಕರಾವಳಿ ಜನರ ನಗರವಾಸಿಗಳ ಜೀವನ ಬರಡಾಗಿದೆ. ಆಧುನಿಕ ರಂಗಭೂಮಿ ಮತ್ತು ನಾಟಕ ಜನರನ್ನು ಹೊಸ ದಿಕ್ಕಿನ ಕಡೆ ಆಲೋಚಿಸಬಹುದಾದ ಸಶಕ್ತವಾದ ಮಾಧ್ಯಮ ಎಂದು ಪ್ರಗತಿಪರ ಚಿಂತಕ ಹೋರಾಟಗಾರ ಮುನೀರ್ ಕಾಟಿಪಳ್ಳ ಅಭಿಪ್ರಾಯ ಪಟ್ಟರು. ಅವರು ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ ರಥಬೀದಿ ಗೆಳೆಯರು ಸಂಘಟನೆ ಆಯೋಜಿಸುತ್ತಿರುವ ಮೂರುದಿನಗಳ ಮುರಾರಿ ಕೆದ್ಲಾಯ ರಂಗೋತ್ಸವ ಉದ್ಘಾಟಿಸಿ ಮಾತನಾಡಿದರು.

ನಾಟಕದ ಮೂಲಕ ಸಮಾಜದಲ್ಲಿ ಉತ್ತೇಜನ ಸೃಷ್ಟಿಸುವ ಹೆಚ್ಚಿಸುವ ಕೆಲಸ ಆಗಬೇಕು. ಭಾಷಣ ಸೆಮಿನಾರ್ ಸಂವಾದ ವಿಚಾರ ಸಂಕೀರ್ಣಗಳು ಒಂದು ಕಡೆ ನಡೆಯುತ್ತಿದ್ದರೆ ನಾಟಕ ಬಹಳ ಪರಿಣಾಮಕಾರಿಯಾಗಿ ಜನಾಭಿಪ್ರಾಯವನ್ನು ಸೃಷ್ಟಿಸುವ ಚಳುವಳಿಯ ರೂಪವನ್ನು ಪಡೆಯಬಹುದಾದ ಮಾಧ್ಯಮ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್, ಎನ್ ಸಂತೋಷ್ ಬಳ್ಳಾಳ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನಾಟಕ ವಿಭಾಗದ ಮುಖ್ಯಸ್ಥ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರೊ. ಸುಬ್ರಮಣ್ಯ ಜೋಶಿ ವಂದಿಸಿದರು. ಮೈಸೂರು ಸಂಕಲ್ಪ ತಂಡದ, ಹಿರಿಯ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ನಟಿಸಿ ನಿರ್ದೇಶಿಸಿದ ಜೊತೆಗಿರುವನು ಚಂದಿರ ನಾಟಕ ಮೊದಲ ದಿನ ಪ್ರದರ್ಶನವಾಯ್ತು.