ಉಡುಪಿ: ಬ್ರಹ್ಮಾವರದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿರುವ 14 ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ಹಾಗೂ ಇದರ ತನಿಖೆಯಲ್ಲಿ ಅನುಸರಿಸಲಾಗುತ್ತಿರುವ ವಿಳಂಬ ನೀತಿಯನ್ನು ವಿರೋಧಿಸಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಕಳೆದ 45 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟವಧಿಯ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಮಾತುಕತೆ ನಡೆಸಿದರು.

ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ವಿಧಾನಪರಿಷತ್ ಮಾಜಿ ಸಭಾಪತಿ ರೈತ ಮುಖಂಡ ಪ್ರತಾಪ್ಚಂದ್ರ ಶೆಟ್ಟಿ ಅವರ ಜೊತೆ ಸುಮಾರು ಅರ್ಧ ಗಂಟೆಗಳ ಕಾಲ ಧರಣಿ ಕುಳಿತಿದ್ದ ಸ್ಥಳದಲ್ಲಿ ಸ್ಪೀಕರ್ ಯುಟಿ ಖಾದರ್ ಮಾತುಕತೆ ನಡೆಸಿದರು. ಈ ಸಂದರ್ಭ ಧರಣಿ ರತ ರೈತರ ನೀಡಿದ ಮನವಿ ಪತ್ರವನ್ನು ಸ್ವೀಕರಿಸಿದ ಖಾದರ್ ರೈತರಿಗೆ ಸೇರಿದ ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡಿ ಹಣ ಲೂಟಿ ಮಾಡಿರುವುದು ದೊಡ್ಡ ಅಪರಾಧ. ರೈತ ಸಂಘ ಎಲ್ಲ ದಾಖಲೆಗಳೊಂದಿಗೆ ನ್ಯಾಯಕ್ಕಾಗಿ ಧರಣಿ ಪ್ರತಿಭಟನೆ ನಡೆಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ ರಾಜ್ಯ ಸರ್ಕಾರ ಖಂಡಿತ ನ್ಯಾಯ ಒದಗಿಸುತ್ತದೆ ಎನ್ನುವ ಭರವಸೆ ಇದೆ ಎಂದರು.

ರಾಜ್ಯ ಸಹಕಾರಿ ಸಚಿವರೊಂದಿಗೆ ಇಲ್ಲಿನ ಸಮಸ್ಯೆಯ ಕುರಿತು ಮಾತನಾಡಿ ರೈತರ ಬೇಡಿಕೆಯಂತೆ ಮೂವರು ಸರಕಾರಿ ಅಧಿಕಾರಿಗಳು ಸೇರಿದಂತೆ ಎಲ್ಲಾ ತಪ್ಪಿತಸ್ಥರ ವಿರುದ್ಧ ಶೀಘ್ರ ಮೊಖದ್ದಮೆ ಹೂಡಲು ಅನುಮತಿ ನೀಡುವಂತೆ ಸೂಚಿಸುತ್ತೇನೆ. ಹಗರಣದಲ್ಲಿ ಭಾಗಿಯಾದವರನ್ನು ರಕ್ಷಿಸುವ ಪ್ರಶ್ನೆ ಇಲ್ಲ ಸಾರ್ವಜನಿಕರ ಹಣ ನುಂಗಿದವರಿಗೆ ಶಿಕ್ಷೆ ಆಗಬೇಕು ನನ್ನಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಈ ಸಂದರ್ಭ ಭರವಸೆ ನೀಡಿದರು. ಇದೇ ಧರಣಿ ಸತ್ಯಾಗ್ರಹವನ್ನ ಕೈಬಿಡುವಂತೆ ಬ್ಯೂಟಿ ಖಾದರ್ ಅವರು ಧರಣಿ ನಿರತರಲ್ಲಿ ವಿನಂತಿಸಿಕೊಂಡರು.
ಸಭಾಪತಿಗಳು ನಮ್ಮ ಧರಣಿ ಸತ್ಯಾಗ್ರಹವನ್ನ ಗಮನಿಸಿ ಸೂಕ್ತ ಸ್ಪಂದನೆ ನೀಡಿರುವುದು ನಮ್ಮ ಹೋರಾಟಕ್ಕೆ ಇನ್ನು ಹೆಚ್ಚಿನ ಬಲತಂದಿದೆ. ಸರಕಾರ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಿ ತಪ್ಪಿತಸ್ಥರ ವಿರುದ್ಧ ಮೊಖದ್ದಮೆ ಹೂಡಿ ತನಿಖೆಗೆ ಅವಕಾಶ ನೀಡಲಿದೆ ಎನ್ನುವ ವಿಶ್ವಾಸವಿದೆ. ನಮ್ಮ ಧರಣಿಯಲ್ಲಿ ಯಾವುದೇ ದುರುದ್ದೇಶವಿಲ್ಲ ಸರಕಾರ ಬೇಡಿಕೆಗಳಿಗೆ ಸ್ಪಂದಿಸಿದ ತಕ್ಷಣ ನಾವು ಧರಣಿ ನಿಲ್ಲಿಸುತ್ತೇವೆ ಎಂದು ರೈತ ಮುಖಂಡ ರೈತ ಸಂಘದ ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ ಈ ಸಂದರ್ಭ ತಿಳಿಸಿದ್ದಾರೆ.