ಗದಗ:
ಶಾಲಾ ವಾರ್ಷಿಕೋತ್ಸವ ಮುಗಿಸಿ ಜೋಶ್ನಲ್ಲಿ ಹಿಂದಿರುಗುತ್ತಿದ್ದ ಹೈಸ್ಕೂಲ್ ಮಕ್ಕಳು ಚಲಾಯಿಸುತ್ತಿದ್ದ ಕಾರು ಡಿವೈಡರ್ಗೆ ಗುದ್ದಿ ಛಿದ್ರಛಿದ್ರವಾಗಿದೆ. ದುರ್ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸತ್ತು ಮತ್ತಿಬ್ಬರು ಗಾಯಗೊಂಡಿದ್ದಾರೆ. ಈ ದಾರುಣ ಘಟನೆ ಗದಗ ತಾಲೂಕಿನ ಹುಲಕೋಟಿ ರೂರಲ್ ಇಂಜಿನಿಯರಿಂಗ್ ಕಾಲೇಜ್ ಬಳಿ ಘಟನೆ ನಡೆದಿದೆ.
ಮೃತರು ಹಾಗೂ ಗಾಯಾಳುಗಳು ಹುಲಕೋಟಿ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದವರು. ವಿದ್ಯಾರ್ಥಿಗಳಲ್ಲಿ ಒಬ್ಬ ಕಾರು ಚಾಲನೆ ಮಾಡುತ್ತಿದ್ದ. ಮಹಮ್ಮದ್ ಮುಜಾವರ್ (16), ಸಂಜೀವ್ ಗಿರಡ್ಡಿ (16) ಮೃತಪಟ್ಟಿದ್ದಾರೆ. ಆಶಿಸ್ ಗುಂಡುರ್ (16) ಹಾಗೂ ಮತ್ತೊಬ್ಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿ ತಡರಾತ್ರಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ನಾಲ್ಕು ಜನ ವಿದ್ಯಾರ್ಥಿಗಳು ಮಾತ್ರ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ವಾರ್ಷಿಕೋತ್ಸವದ ಗ್ಯಾದರಿಂಗ್ ಡ್ಯಾನ್ಸ್ ಮುಗಿಸಿಕೊಂಡು ಉತ್ಸಾಹದಿಂದ ವಾಪಸ್ ಆಗುತ್ತಿದ್ದರು. ಅತಿಯಾದ ವೇಗದಿಂದ ಚಲಾಯಿಸಿ ಡಿವೈಡರ್ಗೆ ಅಪ್ಪಳಿಸಿದ್ದೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.
ಮೃತರ ದೇಹಗಳು ಹಾಗೂ ಗಾಯಾಳುವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮತ್ತೋರ್ವ ಗಾಯಾಳು ವಿದ್ಯಾರ್ಥಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.