ಉಡುಪಿ: ಸುಮಾರು ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರನ್ನು ಉಡುಪಿ ನಗರ ಪೊಲೀಸರು ಬೆಂಗಳೂರಿನಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ ಮಹಿಳಾ ಮಿಸ್ಸಿಂಗ್ ಟಾಸ್ಕ್ ಫೋರ್ಸ್ ಹಾಗೂ ಉಡುಪಿ ನಗರ ಪೊಲೀಸ್ ತಂಡ ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಪತ್ತೆಹಚ್ಚಿದೆ.

ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಿವಾಸಿಯಾಗಿರುವ ಭವಾನಿ ಅವರು ಹುಟ್ಟಿದಾಗಿನಿಂದಲೇ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದರು.

ಸುಮಾರು 10 ವರ್ಷಗಳ ಹಿಂದೆ ಅವರು ಏಕಾಏಕಿ ಕಾಣೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು. ದೀರ್ಘಕಾಲದ ತನಿಖೆ, ಮಾಹಿತಿ ಸಂಗ್ರಹ ಹಾಗೂ ತಾಂತ್ರಿಕ ಸಹಾಯದ ಮೂಲಕ ಮಹಿಳೆಯನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿದ ಪೊಲೀಸರು, ಅವರನ್ನು ಸುರಕ್ಷಿತವಾಗಿ ಉಡುಪಿಗೆ ಕರೆತಂದಿದ್ದಾರೆ.

ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ನಾಪತ್ತೆ ಪ್ರಕರಣಗಳಲ್ಲಿ ನಿರಂತರ ಶ್ರಮ ವಹಿಸುವ ಪೊಲೀಸ್ ತಂಡದ ಕಾರ್ಯವೈಖರಿಗೂ ಪ್ರಶಂಸೆ ವ್ಯಕ್ತವಾಗಿದೆ.



