ಉಡುಪಿ: ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಆಚರಿಸುವ ಮಹನೀಯರು ₹ 10 ಲಕ್ಷ ಖರ್ಚು ಮಾಡಿ ಮನೆ ಕಟ್ಟಿಸಿಕೊಟ್ಟರೇ, ಆ ಮನೆಯಲ್ಲಿ ವಾಸಿವಷ್ಟು ಕಾಲವು ಅವರು ದಾನಿಗಳನ್ನು ನೆನಯುತ್ತಾರೆ. ಅದಕ್ಕಿಂತ ದೊಡ್ಡ ಆರ್ಶೀವಾದ ಬೇರೆಯಿಲ್ಲ ಎಂದರು. ಊರಿನಲ್ಲಿ ಕತೃತ್ವ ಶಕ್ತಿ ಇದೆ. ಇದರಿಂದಲೇ ದೇವಾಲಯಗಳ ಜೀರ್ಣೋದ್ಧಾರ ನಡೆಸಲು ಸಾಧ್ಯವಾಗಿದೆ. ಇನ್ನು ಮುಂದಕ್ಕೆ ಇದೇ ಕೃತೃತ್ವ ಶಕ್ತಿಯನ್ನು ಬಳಸಿಕೊಂಡು ಊರಿಗೊಂಡು ಶಾಲೆ, ಆಸ್ಪತ್ರೆಯನ್ನು ನಿರ್ಮಿಸಿದರೇ, ಆ ಊರು ಅಭಿವೃದ್ಧಿಯಾದಂತೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಹೇಳಿದರು.

ಅವರು ಸೋಮವಾರದಂದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ.) ಬೆಂಗಳೂರು ಇವರಿಂದ ಜಿಲ್ಲೆಯ ಕುಂದಾಪುರ ತಾಲೂಕಿನ 74 ನೇ ಉಳ್ಳೂರು ಗ್ರಾಮದಲ್ಲಿ ₹ 2.50 ವೆಚ್ಚದಲ್ಲಿ ಕೊರಗರ ಕಾಲೋನಿಯಲ್ಲಿ 14 ಮನೆಗಳ ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿ, ಆರ್ಶೀವಚನ ನೀಡಿ, ಸಮಾಜದಲ್ಲಿ ನಾವೆಲ್ಲರೂ ನೆಲದಂತೆ ಬದುಕದೇ, ನೀರಿನಂತೆ ಬದುಕಬೇಕು. ದೇವರ ಕೊಟ್ಟ ಸಂಪತ್ತು ಸಮಾದ ಏಳಿಗೆಗೆ ಹಂಚಬೇಕು. ಅದು ಎಲ್ಲೆಡೆ ಹಬ್ಬಿ, ಇತರರಿಗೂ ಸ್ಫೂರ್ತಿ ಆಗಬೇಕು. ಹೆಚ್.ಎಸ್.ಶೆಟ್ಟಿಯವರ ಕಾರ್ಯವು ಅನೇಕರಿಗೆ ಪ್ರೇರಣೆಯಾಗಿರುವುದು ಶುಭ ಸೂಚನೆ ಎಂದರು. ಟ್ರಸ್ಟ್ನ ಅಧ್ಯಕ್ಷ ಡಾ.ಹೆಚ್.ಎಸ್.ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಉತ್ತಮ ಉದ್ದೇಶವನ್ನು ಹೊಂದಿದ ಮನಸ್ಸು ಮಾಡುವ ಕಾರ್ಯಗಳು ಯಶಸ್ವಿಯಾಗುತ್ತದೆ. ಇಂತಹ ವ್ಯಕ್ತಿಗಳು ಮಾಡುವ ಕೆಲಸಕ್ಕೆ ಶ್ರೀಗಳ ಆರ್ಶೀವಾದ ಮತ್ತು ಸಮಾಜದ ಬೆಂಬಲ ದೊರಕುತ್ತದೆ ಎಂದರು. ಒಳ್ಳೆಯ ಕೆಲಸಗಳು ಮಾಡುವಾಗ ಟೀಕೆ ಮತ್ತು ಪ್ರಶಂಸೆ ಸಾಮಾನ್ಯ. ನಾನು ಬಿಜೆಪಿಯವನೆಂಬ ಆರೋಪ ಇದೆ. ಆದರೆ ನಾನು ಬಿಜೆಪಿ ಅಲ್ಲ, ಅದರ ಸದಸ್ಯನೂ ಅಲ್ಲ. ಜನರು ಆಯ್ಕೆ ಮಾಡಿದ ಪ್ರತಿನಿಧಿಗಳಲ್ಲಿ ಹೆಚ್ಚಿನವರು ಬಿಜೆಪಿಯವರೇ ಇದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿ ಆ ಪಕ್ಷದವರು ಹೆಚ್ಚಿರುತ್ತಾರೆ. ನಾನು ಹಿಂದುತ್ವವಾದಿ. ಹಾಂಗಂದ ಮಾತ್ರಕ್ಕೆ ಇತರ ಮತಗಳ ದ್ವೇಷಿಯಲ್ಲ. ಜಾತಿ ಮತ ಭೇದವನ್ನು ಮರೆತು ಎಲ್ಲಾ ವರ್ಗಕ್ಕೂ ಸಹಾಯ ಮಾಡಿದ್ದೇವೆ ಎಂದವರು ತಿಳಿಸಿದರು.

ಹಿಂದೂ ಧರ್ಮದವರಾದ ಕೊರಗರು ಅತ್ಯಂತ ಹಿಂದುಳಿದವರು. ಇವರಿಗೆ ಮೇಲ್ಜಾತಿಯವರು ತುಂಬಾ ಅನ್ಯಾಯ ಮಾಡಿದ್ದಾರೆ. ಆ ಅನ್ಯಾಯದ ಪಶ್ಚತ್ತಾಪಕ್ಕಾಗಿ ಅವರಿಗಾಗಿ ಕಿಂಚಿತ್ತು ಸೇವೆ ಮಾಡುತ್ತಿದ್ದೇನೆ. ನನ್ನ ಈ ಕಾರ್ಯದಿಂದ ಇತರರು ಪ್ರೇರಣೆಗೊಳ್ಳಲಿ ಎಂದು ನುಡಿದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ನಾವು ರಾಜಕಾರಣಿಗಳು. ನಮ್ಮದು ಸೇವೆಯಲ್ಲ. ಆದರೆ ಹೆಚ್.ಎಸ್.ಶೆಟ್ಟಿಯವರದ್ದು ಸೇವೆ. ಹೀಗಾಗಿ ಸಮಾಜದಲ್ಲಿ ಅತ್ಯಂತ ಮುಗ್ದ ಜನಾಂಗಕ್ಕೆ ಅವರು ನೀಡುತ್ತಿರುವ ಸೇವೆಯೂ ಅನನ್ಯ ಎಂದು ಶುಭ ಹಾರೈಸಿದರು. ಯಕ್ಷಗಾನ ಕಲಾರಂಗದ ಪ್ರ.ಕಾರ್ಯದರ್ಶಿ ಮುರುಲಿ ಕಡೆಕಾರ್ ಮಾತನಾಡಿ, ಪರರಿಗೆ ಸಹಾಯ ಮಾಡಿದಾಗ ಸಿಗುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾವೆಲ್ಲರೂ ಸಾಧ್ಯವಾದರೇ ನಮ್ಮ ಹತ್ತಿರದಲ್ಲಿರುವ ನೊಂದವರಿಗೆ ಸಹಾಯ ಮಾಡೋಣ. ಯಾರ ಬಗ್ಗೆಯೂ ಲಘುವಾಗಿ ಮಾತನಾಡದೇ, ಒಳಿತನ್ನೇ ಬಯಸುವ. ಭಿನ್ನಾಭಿಪ್ರಾಯಗಳಿದ್ದಲ್ಲಿ ಮೌನವಾಗಿರುವುದು ಉತ್ತಮ ಎಂದವರು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಉತ್ತಮ ಕಾರ್ಯಕ್ರಮಕ್ಕಾಗಿ ಹೆಚ್.ಎಸ್.ಶೆಟ್ಟಿಯವರು ಮಾಡಿರುವ ಸಂಕಲ್ಪ ದೊಡ್ಡದು. ಆ ಸಂಕಲ್ಪ ನಿರ್ವಿಘ್ನವಾಗಿ ನೆರವೇರಲಿ ಎಂದು ಹಾರೈಸಿದರು. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, 74 ಉಳ್ಳೂರು ಗ್ರಾ.ಪಂ ಅಧ್ಯಕ್ಷೆ ಕುಸುಮಾ ಶೆಟ್ಟಿ, ಟ್ರಸ್ಟ್ನ ಹಾಲಾಡಿ ನಾಗರಾಜ್ ಶೆಟ್ಟಿ, ಉಳ್ಳೂರು 74 ಬನಶಂಕರಿ ದೇವಸ್ಥಾನದ ಮುಖ್ಯಸ್ಥರು ಸಂಜೀವ್ ಶೆಟ್ಟಿ ಉಪಸ್ಥಿತರಿದ್ದರು. ದಾಮೋದರ್ ಶರ್ಮ ಸ್ವಾಗತಿಸಿ, ನಿರೂಪಿಸಿದರು.


