Saturday, June 28, 2025

spot_img

ಹೇರಂಜಾಲು ಏತನೀರಾವರಿ ಯೋಜನೆ ಸಭೆಯಲ್ಲಿ ಹೊಯ್‌ ಕೈ…!?

ಬೈಂದೂರು : ಬೈಂದೂರು ತಾಲೂಕು ಕಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇರಂಜಾಲು ಏತನೀರಾವರಿ ಯೋಜನೆ ಸಾಧಕ ಬಾಧಕಗಳ ಕುರಿತು ಸ್ಥಳೀಯ ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ಚರ್ಚೆಗಾಗಿ ಹೇರಂಜಾಲು ಶ್ರೀ ದುರ್ಗಾ ಗಣೇಶೋತ್ಸವ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಎರಡು ತಂಡಗಳ ನಡುವೆ ವಾಗ್ವಾದ ನಡೆದು ಕೈ ಮೀಲಾಯಿಸುವ ವರೆಗೂ ತೆರಳಿದ ಘಟನೆ ನಡೆಯಿತು.


ಬೈಂದೂರು ತಾಲೂಕು ವ್ಯಾಪ್ತಿಯ ಕಾಲ್ತೋಡು, ಹೇರೂರು, ಕಂಬದಕೊಣೆ, ಹೇರಂಜಾಲು ಗ್ರಾಮದ ನಡುವೆ ಹಾದು ಹೋಗುವ ಎಡಮಾವಿನ ಹೊಳೆಯ ಮಧ್ಯ ಹೇರಂಜಾಲಿನ ಗಡಿ ಭಾಗದಲ್ಲಿ ನಿರ್ಮಿಸಲು ಸಿದ್ಧಗೊಳ್ಳುತ್ತಿರುವ ಶ್ರೀ ಗುಡೇ ದೇವಸ್ಥಾನ ಏತ ನೀರಾವರಿ ಯೋಜನೆಯಲ್ಲಿ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಇದರಿಂದ ಸ್ಥಳೀಯ ರೈತರಿಗೆ ಸಮಸ್ಯೆ ಸೃಷ್ಟಿಯಾಗಿದೆ ಎಂದು ಒಂದು ತಂಡ ತಮ್ಮ ಬೇಸರ ಆಕ್ರೋಶ ಹೊರ ಹಾಕಿತ್ತು. ಇದನ್ನು ವಿರೋಧಿಸಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ರೈತ ಮುಖಂಡರಾದ ಎಸ್.ಪ್ರಕಾಶ್ಚಂದ್ರ ಶೆಟ್ಟರ ಮೈಕ್ ಕಸಿದುಕೊಂಡು ಎಳೆದಾಡಿದ ಘಟನೆ ನಡೆಯಿತು.


ಕಾಮಗಾರಿ ಅವೈಜ್ಞಾನಿಕವಾಗಿದ್ದು, ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಗ್ರಾಮ ಪಂಚಾಯತ್‍ಗೆ 15 ದಿನಗಳ ಹಿಂದೆ ಮಾಹಿತಿ ನೀಡಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರಿಗೆ ಈ ಬಗ್ಗೆ ಸೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಷ್ಟು ದೊಡ್ಡ ಯೋಜನೆ ಆಗುತ್ತಿದ್ದರೂ ಕೂಡಾ ಎಲ್ಲಿಯೂ ಕೂಡಾ ಒಂದು ಬೋರ್ಡ್ ಸಹ ಹಾಕಿಲ್ಲ. ಅಣೆಕಟ್ಟುವಿನ ನೀರಿನ ಪ್ರಮಾಣದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈಗಾಗಲೇ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಅನುಭವಿಸಿದ ರೈತರಿಗೆ ಪರಿಹಾರ ನೀಡಿಲ್ಲ. 1ಸಾವಿರ ಎಕ್ರೆ ಹಿಂಗಾರು ಹಂಗಾಮಿ ಭತ್ತ ಬೇಸಾಯ ಮಾಡುವವರು ಇಲ್ಲಿ ಇದ್ದಾರೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ, ಸರ್ವೇ ಆಗಿಲ್ಲ, ನೀರು ನಿರ್ವಹಣೆ ಸಮಿತಿ ರಚನೆ ಮಾಡಿಲ್ಲ, ನೀರು ತುಂಬಿದಾಗ ನದಿ ಬದುಗಳನ್ನು ಮಣ್ಣಿನ ಕಟ್ಟು ಕಟ್ಟಿ ಏರಿಸುವುದಾಗಿ ಹೇಳುತ್ತಾರೆ. ನೀರು ಮೇಲ್ಭಾಗದಲ್ಲಿ ತುಂಬಿರುವಾಗ ತಗ್ಗು ಪ್ರದೇಶದಲ್ಲಿರುವ ಗದ್ದೆಗೆ ನೀರಿನ ಉಜುರು ಬರುತ್ತದೆ. ಇದು ಸಾಮಾನ್ಯ ಜನರಿಗೂ ಗೊತ್ತಿದೆ. ಅಧಿಕಾರಿಗಳು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು.

ಇಲ್ಲಿ ಯಾರೂ ಯೋಜನೆಯ ವಿರೋಧಿಗಳಿಲ್ಲ, ಇದು ಯಾವ ಗಲಾಟೆ, ಪ್ರತಿಭಟನೆ, ಆಂದೋಲನ ಸತ್ಯಾಗ್ರಹ ಅಲ್ಲ. ಕೇವಲ ನೀರಿನ ಕುರಿತಾಗಿ ನಮ್ಮಲ್ಲಿರುವ ಗೊಂದಲಗಳು ಹಾಗೂ ಅದರ ಪರಿಹಾರಕ್ಕಾಗಿ ಸಭೆ ಕರೆಯಲಾಗಿದ್ದು, ಅಧಿಕಾರಿಗಳು ಸಭೆಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ರೈತರಿಗೆ ಮತ್ತು ಸ್ಥಳೀಯರಿಗೆ ಕಾಮಗಾರಿ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು, ಅವರ ಗೊಂದಲ ನಿವಾರಣೆಯಾಗಬೇಕು. ಕಾಮಗಾರಿಯ ಕುರಿತು ಮೂಡಿರುವ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಬೇಕು ದಯವಿಟ್ಟು ಅಧಿಕಾರಿಗಳು ಉತ್ತರಿಸಬೇಕು ಎಂದರು. ಇದೇ ಸಂದರ್ಭ ಮಧ್ಯ ಪ್ರವೇಶ ಮಾಡಿದ ಕಾಲ್ತೊಡು ವಿಜಯಶೆಟ್ಟಿ ಹಾಗೂ ತಂಡ, ಸಭೆಯಲ್ಲಿ ಅಧಿಕಾರಿಗಳಿಗೆ ಮಾತನಾಡಲು ಅವಕಾಶ ಕೊಡಿ ನೀವೇ ಮಾತನಾಡುತ್ತಿದ್ದರೆ ಅಧಿಕಾರಿಗಳು ಹೇಗೆ ಉತ್ತರಿಸಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು ಈ ಸಂದರ್ಭ ವಾಗ್ವಾದ ಜೋರಾಗಿ ಕೈ ಮೀಲಾಯಿಸುವ ಹಂತಕ್ಕೆ ಹೋಯಿತು. ಈ ಸಂದರ್ಭ ಆಯತಪ್ಪಿದ ಪ್ರಕಾಶ್ ಚಂದ್ರ ಶೆಟ್ಟಿ ನೆಲಕ್ಕೆ ಬಿದ್ದರು. ಸ್ವಲ್ಪ ಸಮಯ ಗೊಂದಲದ ವಾತಾವರಣ ಸೃಷ್ಟಿಯಾಯಿತು.



ಈ ಸಂದರ್ಭ ಆಗಮಿಸಿದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಸರಕಾರದ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಪಾಟುಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಸುಮಾರು 70 ಕೋಟಿ ರೂಪಾಯಿಯ ದೊಡ್ಡ ಯೋಜನೆ ಈ ಗ್ರಾಮಕ್ಕೆ ಬಂದಿದೆ. ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಗ್ರಾಮಸ್ಥರು ತಮ್ಮ ಹಕ್ಕು ಕೇಳುತ್ತಾರೆ, ಅಧಿಕಾರಿಗಳು ವಾದ ಮಾಡದೆ ಅವರಿಗೆ ಅನುಕೂಲವಾಗುವಂತೆ, ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.ನಾವೀಗ ಸಾಕಷ್ಟು ದೂರ ಬಂದಾಗಿದೆ. ಇಷ್ಟರೊಳಗೆ ನಮ್ಮ ಸಮಸ್ಯೆಯನ್ನು ತಿಳಿಸಬೇಕಾಗಿತ್ತು. ಈಗಲೂ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆಯನ್ನು ಗಮನಿಸಬೇಕು. ನಾಗರಿಕರ ಸಮಿತಿ ರಚನೆ ಮಾಡಬೇಕು, ರೈತರ ಸಭೆ ಕರೆಯಬೇಕು ಎಂದು ಹೇಳಿದ ಅವರು, ಇಲ್ಲಿ ಆಗಬೇಕಾದ ವಿಷಯದ ಬಗ್ಗೆ ಗ್ರಾಮದ ಪ್ರಮುಖರು, ಅಧಿಕಾರಿಗಳ ಸಭೆ ನಡೆಸಿ, ತೀರ್ಮಾನ ತಗೆದುಕೊಳ್ಳೊಣ ಎಂದರು.


ಬಳಿಕ ಮಾತನಾಡಿದ ರೈತ ಮುಖಂಡ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಶಾಸಕ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಆಗಬೇಕು, ಜ್ಯಾಕ್ ವೆಲ್ ಅಳವಡಿಕೆ, ರೈತರಿಗೆ ಪರಿಹಾರ ನೀಡುವಿಕೆ, ಅವೈಜ್ಞಾನಿಕ ಕಾಮಗಾರಿ, ಭತ್ತ ಬೆಳೆಗಾರರಿಗೆ ಸೆಸ್‍ನಿಂತ ವಿನಾಯಿತಿ ಬಗ್ಗೆ ಉತ್ತರ ಸಿಗಬೇಕು ಎಂದರು. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪುನೀತ್ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಸಭೆಯಲ್ಲಿ ಕಂಬದಕೋಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗಮ್ಮ ದೇವಾಡಿಗ, ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಅಭಿವೃದ್ಧಿ ಅಧಿಕಾರಿಗಳು, ರೈತ ಮುಖಂಡರು, ಇಲಾಖೆಯ ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles