ಉಡುಪಿ: ಪರಿಸರ ಪೂರಕ ಶುದ್ಧ ವಸ್ತುಗಳ ಬಳಕೆಯಿಂದ ಶುದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಅದಮಾರು ಮಠದ ಶ್ರೀ ಈಶ ಪ್ರಿಯ ತೀರ್ಥ ಸ್ವಾಮೀಜಿ ಪ್ರತಿಪಾದಿಸಿದರು. ನಗರದ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಾಗರದ ಹೆಗ್ಗೋಡು- ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಹಮ್ಮಿಕೊಂಡಿರುವ ಮೂರು ದಿನಗಳ ಕೈ ಉತ್ಪನ್ನ ಹಾಗೂ ಕೈಮಗ್ಗ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಪ್ರಕೃತಿಗೆ ಹತ್ತಿರವಾಗಿ ಬದುಕಿದರೆ ಆತನ ದೇಹ, ಮನಸ್ಸು ಎರಡೂ ಸುಸ್ಥಿತಿಯಲ್ಲಿರುತ್ತವೆ ಎಂಬುದು ಸಾಬೀತಾಗಿದೆ. ಈ ಎರಡೂ ಶುದ್ಧವಾಗಿದ್ದರೆ ನಾವು ಬದುಕುವ ಸಮಾಜವೂ ಸಹಜವಾಗಿಯೇ ಶಾಂತವಾಗಿರುತ್ತದೆ ಎಂದು ಸ್ವಾಮೀಜಿ ವಿಶ್ಲೇಷಿಸಿದರು. ಶುದ್ಧ ಆಹಾರ ಎಂದರೆ ಕೇವಲ ಹಣ್ಣು- ಹಂಪಲು ಅಲ್ಲ. ನಮ್ಮ ಪಂಚೇಂದ್ರಿಯಗಳು ಗ್ರಹಿಸುವ ವಸ್ತುಗಳೆಲ್ಲವೂ ಶುದ್ಧವು, ಸುಂದರವೂ ಆಗಿರಬೇಕು. ಈ ಬಗ್ಗೆ ಯುವ ಸಮುದಾಯಕ್ಕೆ ಮಾಹಿತಿ ನೀಡಬೇಕು ಎಂದು ಅವರು ಸಲಹೆ ನೀಡಿದರು. ಚರಕ ಸಂಸ್ಥೆ ಪ್ರಕೃತಿಗೆ ಪೂರಕವಾದ ಕೈಮಗ್ಗ ಉತ್ಪಾದನೆಯಲ್ಲಿ ಆಂದೋಲನವನ್ನೇ ಕೈಗೊಂಡಿದೆ. ಇದಕ್ಕೆ ಸಮಾಜ, ಸರ್ಕಾರ ಸಹಕಾರ ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ ಮಾತನಾಡಿ, ಸುಸ್ಥಿರತೆ, ಗ್ರಾಮರಾಜ್ಯ ಈ ಪದಪುಂಜಗಳು ಕೇವಲ ಪ್ರತಿಕಾ ಹೇಳಿಕೆಗಳಿಗೆ ಸೀಮಿತವಾಗಿವೆ. ಇವುಗಳು ಎಲ್ಲಿಯವರೆಗೂ ನಮ್ಮ ಸರ್ಕಾರದ ನೀತಿ-ನಿರೂಪಣೆಯಲ್ಲಿ ಅಡಕವಾಗುವುದಿಲ್ಲ ಅಲ್ಲಿಯವರೆಗೂ ಉತ್ಪಾದನೆ, ಉದ್ಯೋಗ ನಿರ್ಮಾಣವಾಗುವುದಿಲ್ಲ ಎಂದು ಹೇಳಿದರು. ಆಧುನಿಕ ಜಗತ್ತಿನಲ್ಲಿ ಮಾಲಿನ್ಯವೇ ತುಂಬಿಕೊಂಡಿದೆ. ಸಹಜವಾಗಿಯೇ ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಪ್ರಕೃತಿಗೆ ಪೂರಕವಾದ ಉತ್ಪನ್ನಗಳ ಬಳಕೆ ಬಗ್ಗೆ ಗಮನ ಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮಿ ಮಾತನಾಡಿ, ಮನುಷ್ಯನಿಗೆ ಈಗ ಆಹಾರಕ್ಕಿಂತ ಬಟ್ಟೆ ಮುಖ್ಯವಾಗಿದೆ. ಆದರೆ, ಎಂತಹ ಬಟ್ಟೆ ತೊಡುತ್ತಿದ್ದೇವೆ ಎನ್ನುವುದು ಮುಖ್ಯವಾಗಬೇಕಿದೆ. ಕೈಮಗ್ಗ ಬಟ್ಟೆಗಳಿಂದಷ್ಟೇ ಪರಿಸರಕ್ಕೆ ಹತ್ತಿರವಾಗಿ ಬದುಕಲು ಸಾಧ್ಯ ಎಂದರು. ಚರಕ ಕಳೆದ 29 ವರ್ಷಗಳಿಂದ ನೈಸರ್ಗಿಕ ಬಣ್ಣದ ಬಟ್ಟೆಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಗ್ರಾಮೀಣ ಹೆಣ್ಣುಮಕ್ಕಳಿಗೆ ಅವರಿರುವ ಸ್ಥಳದಲ್ಲೇ ಉದ್ಯೋಗ ನೀಡುವ ಮೂಲಕ ಗ್ರಾಮೀಣ ವಲಸೆಯನ್ನು ತಡೆಗಟ್ಟಿದೆ. ಚರಕದ ಈ ಕೆಲಸಕ್ಕೆ ಸಮಾಜವೂ ಕೈಜೋಡಿಸಬೇಕು ಎಂದರು. ಸಭೆಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ, ಚರಕ ಸಂಸ್ಥೆಯ ಸಿಇಒ ಟೆರೆನ್ಸ್ ಪೀಟರ್, ವಿನ್ಯಾಸ ವಿಭಾಗದ ಮುಖ್ಯಸ್ಥೆ ಪದ್ಮಶ್ರೀ ಉಪಸ್ಥಿತರಿದ್ದರು. ಮೇಳದಲ್ಲಿ 10 ಮಳಿಗೆಗಳಿದ್ದು, ಇದೇ 9ರ ಭಾನುವಾರದವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 8.30ವರೆಗೆ ತೆರೆದಿರುತ್ತದೆ.