ಉಡುಪಿ : ಮನೆಯ ಸುತ್ತಲೂ ಕಂಬಿ ಗೋಡೆ ನಿರ್ಮಿಸುತ್ತಿದ್ದ ವೇಳೆ ತಂದೆ–ಮಗನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಹಿರಿಯಡಕ ಬಳಿ ನಡೆದಿದೆ. ಹುಸೇನ್ ಶೇಖ್ ಅಹಮ್ಮದ್ (74), ತಮೀಮ್ ಹುಸೇನ್ ಶೇಖ್ (34) ಬಂಧಿತರು.

ಪೊಲೀಸರ ಮಾಹಿತಿಯಂತೆ ನವೆಂಬರ್ 11ರಂದು ಸಂಜೆ 3.30ರ ವೇಳೆ ರಫೀಕ್ ಮತ್ತು ಅವರ ಮಗ ಶಾರೀಕ್ ಅವರ ಮನೆಯ ಕಂಬಿ ಗೋಡೆ ನಿರ್ಮಿಸುವ ವಿಚಾರವಾಗಿ, ಆರೋಪಿಗಳಾದ ಹುಸೇನ್ ಶೇಖ್ ಅಹಮ್ಮದ್ ಹಾಗೂ ಅವರ ಮಗ ತಮೀಮ್ ಕಾರಿನಲ್ಲಿ ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿದ್ದಾರೆ. ನಂತರ ಶಾರೀಕ್ ಅವರನ್ನು ಎಳೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದು, ಈ ವೇಳೆ ತಮೀಮ್ ಅವರ ಬೆನ್ನಿಗೆ ಹಲವಾರು ಬಾರಿ ಚಾಕುವಿನಿಂದ ಇರಿದಿರುವುದಾಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಯನ್ನು ಕೈಗೊಂಡು, ಆರೋಪಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಮಾರೂತಿ ಸಿಯಾಜ್ ಕಾರು ಮತ್ತು ಕಬ್ಬಿಣದ ಕಟ್ಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ತಮೀಮ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಗ್ಯ ಸಮಸ್ಯೆ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಹುಸೇನ್ ಅವರನ್ನು ನವೆಂಬರ್ 18ರಂದು ಬಿಡುಗಡೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಆರೋಪಿಗಳ ಮೇಲೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.



