ಉಡುಪಿ: ಹಂಗಾರಕಟ್ಟೆ ಕೋಡಿ ಬೆಂಗ್ರೆಗಳ ಮೀನುಗಾರಿಕಾ ಕಿರು ಬಂದರು ಅಭಿವೃದ್ಧಿಗೆ ಸಮಗ್ರ ಯೋಜನಾ ವರದಿ ತಯಾರಿಸಲು ಸಂಸದ ಕೋಟ ಮೀನುಗಾರಿಕಾ ಮತ್ತು ಬಂದರು ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು. ಹಂಗಾರಕಟ್ಟೆಯಲ್ಲಿ ಇಕ್ಕೆಲಗಳಲ್ಲಿ ಸುಮಾರು 1 ಕಿ.ಮೀ ವಿಸ್ತೀರ್ಣದ ಬ್ರೇಕ್ವಾಟರ್ ಕಾಮಗಾರಿ ನೆನೆಗುದಿಗೆ ಬಿದ್ದ ಬಗ್ಗೆ ಚರ್ಚೆ ನಡೆದು ಕೋಡಿ-ಕನ್ಯಾಣದಿಂದ ಬೆಂಗ್ರೆಯವರೆಗೆ 3 ಕಿ.ಮೀ ಹೂಳೆತ್ತುವ ಕಾಮಗಾರಿ 11 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಕ್ಕೆ ಪ್ರಸ್ತಾಪನೆ ಹೋಗಿದೆ ಎಂದು ಮೀನುಗಾರಿಕಾ ಇಲಾಖಾ ಅಧಿಕಾರಿಗಳು ಸಂಸದರು ಮತ್ತು ಶಾಸಕರಿಗೆ ತಿಳಿಸಿದರು. ಸಭೆಯಲ್ಲಿ ಮೀನುಗಾರಿಕಾ ಮುಖಂಡರು ಮಾತನಾಡಿ ಮಲ್ಪೆ ಬಂದರಿನ ನಂತರ ಹೆಚ್ಚು ಒತ್ತಡವಿರುವ ಹಂಗಾರಕಟ್ಟೆ ಬಂದರು

ಅಭಿವೃದ್ಧಿಯಾದರೆ ಮೀನುಗಾರಿಕಾ ದೋಣಿ ನಿಲುಗಡೆಗೆ ಸಹಾಯವಾಗುತ್ತದೆ ಎಂದರು. ಕೊಚ್ಚಿನ್ ಶಿಪ್ ಯಾರ್ಡ್ ಬಳಿಯಿರುವ ಖಾಸಗಿ ಜಾಗದ ಮಾಲಿಕರೊಡನೆ ಚರ್ಚಿಸಿ ಸರ್ಕಾರ ಭೂ ಸ್ವಾಧೀನ ಮಾಡಿಕೊಂಡರೆ ಹೊಸ ಜಟ್ಟಿ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ವಿವರಿಸಿದರು. ಹೊಸ ಪ್ರಾಂಗಣ ಮೀನು ಏಲಂ ಮಾರುಕಟ್ಟೆ, ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶೇ.60-40 ರ ಧನಸಹಾಯದ ಯೋಜನೆಯೊಂದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಸಂಸದ ಕೋಟ ಸಲಹೆಯಿತ್ತರು ಮತ್ತು ಕೇಂದ್ರ ಸರ್ಕಾರದ ಮತ್ಸ್ಯಸಂಪದ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉಡುಪಿ ಜಿಲ್ಲೆಯ ಶಾಸಕರೊಂದಿಗೆ ಕೂಡಲೇ ಸಭೆ ಕರೆಯಲು ಮೀನುಗಾರಿಕಾ ಅಧಿಕಾರಿಗಳಿಗೆ ಸೂಚನೆಯಿತ್ತರು.

ಸಭೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕೊಚ್ಚಿನ್ ಶಿಪ್ಯಾರ್ಡ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರಿಕುಮಾರ್, ಜಂಟಿ ಮೀನುಗಾರಿಕಾ ನಿರ್ದೇಶಕ ವಿವೇಕ್, ಮೀನುಗಾರಿಕಾ ಉಪನಿರ್ದೇಶಕ ಕುಮಾರಸ್ವಾಮಿ, ಬಂದರು ಇಲಾಖೆಯ ಪ್ರಸನ್ನ ಮತ್ತು ಶ್ರೀಮತಿ ಶೋಭಾ ತಾಲ್ಲೂಕಿನ ಮೀನುಗಾರಿಕಾ ಉಪನಿರ್ದೇಶಕರು ಹಾಗೂ ಮೀನುಗಾರಿಕಾ ಮುಖಂಡರಾದ ರಾಜೇಂದ್ರ ಸುವರ್ಣ, ನಾಗರಾಜ್ ಬೆಂಗ್ರೆ, ಸುದಿನ ಬೆಂಗ್ರೆ, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ಸಭೆಯಲ್ಲಿ ಉಪಸ್ಥಿತರಿದ್ದರು.



