ಉಡುಪಿ : ಬಡಗುತಿಟ್ಟಿನ ಪ್ರಸಿದ್ಧ ಚಂಡೆವಾದಕರಾದ ನೀಲಾವರ ಸೂರ್ಯ ದೇವಾಡಿಗರು(56) (14.6.2025) ನಿಧನ ಹೊಂದಿದರು. ಮಡಮಕ್ಕಿ,ಅಮೃತೇಶ್ವರಿ,ಮೇಗರವಳ್ಳಿ, ಹಾಲಾಡಿ ಮತ್ತು ದೀರ್ಘಕಾಲ ಮಂದಾರ್ತಿ ಮೇಳ ಹೀಗೆ ಒಟ್ಟು ಮೂರು ದಶಕಗಳ ಕಾಲ ಚಂಡೆವಾದಕರಾಗಿ ಸೇವೆಗೈದಿದ್ದರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಎ.ಪಿ. ಪಾಠಕರ ಶಿಷ್ಯರಾಗಿ ಚಂಡೆ,ಮದ್ದಲೆ ವಾದನ ನುಡಿಸುವುದನ್ನು ಕರಗತ ಮಾಡಿಕೊಂಡಿದ್ದರು.ಜೊತೆಗೆ ಕುಲಕಸುಬಾದ ವಾದ್ಯ ನುಡಿಸುವುದನ್ನು, ಮುಖ್ಯವಾಗಿ ನೀಲಾವರ ದೇವಳದಲ್ಲಿ,ತನ್ನ ಪ್ರವೃತ್ತಿಯಾಗಿ ಸ್ವೀಕರಿಸಿ ಅದರಲ್ಲಿ ತೊಡಗಿಸಿಕೊಂಡಿದ್ದರು.ಕೆಲವು ವರ್ಷದ ಹಿಂದೆ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದು,ಈ ತಿರುಗಾಟದಲ್ಲಿ,ಒಂದು ತಿಂಗಳು ಮಾತ್ರ ಮಾರಣಕಟ್ಟೆ ಮೇಳದಲ್ಲಿ ಚಂಡೆವಾದಕರಾಗಿ ಸೇವೆ ಸಲ್ಲಿಸಿದ್ದರು. ಸರಳ ಸಜ್ಜನಿಕೆಯ ಇವರು ಪತ್ನಿ,ಪುತ್ರ, ಪುತ್ರಿ ಹಾಗೂ ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ, ಎಂ.ಗಂಗಾಧರ್ ರಾವ್, ಕಾರ್ಯದರ್ಶಿ ಮರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.