ಉಡುಪಿ : ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ಈ ಯೋಜನೆಗಳಲ್ಲಿ ಅತ್ಯಂತ ಮಹತ್ತರವಾದ ಗೀತಾಮಂದಿರ ಸಮೀಪದಿಂದ ರಥಬೀದಿ ಸಂಪರ್ಕಿಸುವ ಅತ್ಯಾಕರ್ಷಕವಾದ ಸುವರ್ಣ ಮೇಲ್ಸೇತುವೆ ಕಾಮಗಾರಿಗೆ ಭೂಮಿಪೂಜೆಯನ್ನು ಪರಮಪೂಜ್ಯ ಉಭಯ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾನ್ಯ ಪ್ರಹ್ಲಾದ ಜೋಶಿ ಅವರು ಪರಮಪೂಜ್ಯ ಶ್ರೀಪಾದರು ವಿಶ್ವದಾದ್ಯಂತ ಸ್ಥಾಪಿಸಿರುವ ಮಠಗಳಿಂದ ನಿರಂತರವಾಗಿ ನಡೆಯುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಕ್ತವಾಗಿ ಶ್ಲಾಘಿಸಿದರು. ಈ ದೇಶದ ಮುಖ್ಯ ಗ್ರಂಥವಾದ ಭಗವದ್ಗೀತಾ ಪ್ರಚಾರದ ಉದ್ದೇಶದಿಂದ ಪೂಜ್ಯರು ನಡೆಸುತ್ತಿರುವ ಕೋಟಿ ಗೀತಾ ಲೇಖನ ಯಜ್ಞದ ಆಂದೋಲನವನ್ನು ಪ್ರಶಂಸಿಸಿದರು. ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀ ಪ್ರಹ್ಲಾದ ಜೋಶಿ ಅವರನ್ನು ಆದರ್ಶ ರಾಜಕಾರಣಿ ಕಳಂಕ ರಹಿತ ರಾಜಕಾರಣಿ ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಶ್ರೀ ಜೋಷಿ ದಂಪತಿಗಳಿಗೆ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೀಡಿದರು. ಕೋಟಿಗೀತಾಲೇಖನ ಯಜ್ಞದಲ್ಲಿ ದೀಕ್ಷಿತರಾಗಿ 110 ಬಾರಿ ಗೀತೆಯನ್ನು ಬರೆದ ಶ್ರೀಮತಿ ನಿರ್ಮಲಾ ಕಾಮತ್ ಅವರು 110 ಪುಸ್ತಕಗಳನ್ನು ಪೂಜ್ಯ ಶ್ರೀಪಾದರಿಗೆ ಸಮರ್ಪಿಸಿದರು. ಹಾಗೆಯೇ ಈಗಾಗಲೇ 85 ಬಾರಿ ಗೀತೆಯನ್ನು ಬರೆದ ಶ್ರೀಮತಿ ಶೋಭಾ ಕಿಣಿ ಅವರು ಪಸ್ತಕಗಳನ್ನು ಸಮರ್ಪಿಸಿದರು. ಶ್ರೀಪಾದರು ಇವರಿಬ್ಬರ ಸಾಧನೆಯನ್ನು ಪ್ರಶಂಸಿಸಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಪ್ರಸಾದವನ್ನು ನೀಡಿ ಅನುಗ್ರಹಿಸಿದರು.

ಸಭೆಯಲ್ಲಿ ಪ್ರಹ್ಲಾದ ಜೋಶಿ ಅವರ ಆಪ್ತ ಕಾರ್ಯದರ್ಶಿಗಳಾದ ನಾರಾಯಣ ಗಂಭೀರ್, ಮಠದ ದಿವಾನರಾದ ನಾಗರಾಜ ಆಚಾರ್ಯರು, ಶ್ರೀಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿಗಳಾದ ಎಂ. ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ರತೀಶ್ ತಂತ್ರಿ, ಸಂತೋಷ್ ಶೆಟ್ಟಿ, ಸುಗುಣ ಮಾಲಾ ಪತ್ರಿಕೆಯ ಸಂಪಾದಕರಾದ ಮಹಿತೋಷ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಡಾ. ಬಿ.ಗೋಪಾಲಾಚಾರ್ಯರು ಕಾರ್ಯಕ್ರಮವನ್ನು ನಿರೂಪಿಸಿದರು. ಮಧ್ಯಾಹ್ನ ಪೂಜಾ ಸಮಯದಲ್ಲಿ ಬಂದ ಸಚಿವರು ಶ್ರೀಕೃಷ್ಣಮುಖ್ಯಪ್ರಾಣರ ದರ್ಶನ ಪಡೆದು ಭೋಜನ ಪ್ರಸಾದವನ್ನು ಸ್ವೀಕರಿಸಿದರು.