ಉಡುಪಿ : ರಾಜ್ಯದಲ್ಲಿ ಸುದೀರ್ಘಾವಧಿಯ ಮುಖ್ಯಮಂತ್ರಿ ಎಂಬ ದಾಖಲೆಯ ವಿಚಾರಕ್ಕೆ ಸಂಬಂಧಿಸಿ ನಟ, ನಿರ್ದೇಶಕ ಪ್ರಕಾಶ್ ರಾಜ್ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಯಾವುದೋ ದಾಖಲೆ ಮಾಡುತ್ತಾರೆ, ಅದು ಇರಲಿ ಎಂದು ಸರಳವಾಗಿ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಶೈಲಿಯನ್ನು ವಿಶ್ಲೇಷಿಸಿದ ಪ್ರಕಾಶ್ ರಾಜ್, ಅರಸು ಅವರ ಕಾಲಘಟ್ಟವೇ ಬೇರೆ, ಸಿದ್ದರಾಮಯ್ಯ ಅವರ ಕಾಲಘಟ್ಟವೇ ಬೇರೆ. ಕಾಲಘಟ್ಟ ಬದಲಾಗಿದ್ದರೂ ಆಡಳಿತದ ಮೇಲೆ ಮುಖ್ಯಮಂತ್ರಿಗಳು ಸಂಪೂರ್ಣ ಹಿಡಿತ ಇಟ್ಟುಕೊಂಡು ಕೆಲಸ ಮಾಡಿದರೆ ಅದು ರಾಜ್ಯಕ್ಕೆ ಒಳ್ಳೆಯದು ಎಂದರು.

ಆದರೆ, ಮುಖ್ಯಮಂತ್ರಿ ಅವರ ಆಪ್ತರ ಮೇಲೆ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಆಪ್ತರ ಮೇಲೆ ಇರುವ ಭ್ರಷ್ಟಾಚಾರದ ಆರೋಪಗಳು ಮುಖ್ಯಮಂತ್ರಿಗೆ ಶೋಭೆಯಲ್ಲ. ಇವೆಲ್ಲವನ್ನು ಸರಿಪಡಿಸಿ, ಆಡಳಿತ ಪಾರದರ್ಶಕವಾಗಿರಬೇಕು ಎಂದು ಸ್ಪಷ್ಟವಾಗಿ ಹೇಳಿದರು.

ತಮ್ಮ ನಿಲುವನ್ನು ವಿವರಿಸಿದ ಪ್ರಕಾಶ್ ರಾಜ್, ನಾನು ಬರಿ ಹೊಗಳುಭಟ್ಟ ಅಲ್ಲ. ಒಳ್ಳೆಯದನ್ನು ಒಳ್ಳೆಯದು ಎಂದು ಹೇಳುತ್ತೇನೆ, ತಪ್ಪಿದ್ದರೆ ಪ್ರಶ್ನೆಯನ್ನೂ ಕೇಳುತ್ತೇನೆ. ಅದು ನನ್ನ ಧರ್ಮ ಎಂದು ಹೇಳಿದರು. ಇದೇ ವೇಳೆ, ಅಹಿಂದ ನಾಯಕತ್ವದ ಕುರಿತು ಮಾತನಾಡಿ, ಅವರಿಗೆ ಅಭಿನಂದನೆಗಳು. ಅಹಿಂದ ನಾಯಕತ್ವ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ತಮ್ಮ ರಾಜಕೀಯ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ಯಾವುದೇ ರಾಜಕೀಯ ಪಕ್ಷವಲ್ಲ. ನಾನು ನಿರಂತರ ವಿರೋಧ ಪಕ್ಷ. ಆಡಳಿತ ಯಾರದ್ದೇ ಇರಲಿ, ಜನಪರವಾಗಿ ನಡೆಯದಿದ್ದರೆ ಪ್ರಶ್ನಿಸುವುದು ನನ್ನ ಕರ್ತವ್ಯ ಎಂದು ಹೇಳಿದರು.



