ಉಡುಪಿ : ಕುಕ್ಕುಂಡಿ ಹೊಳೆಬಾಗಿಲು ಮಡಿಸಾಲು ಹೊಳೆಯಲ್ಲಿ ನವೆಂಬರ್ 10ರಂದು ಸಂಜೆ 4 ಗಂಟೆಯ ಸುಮಾರಿಗೆ 16 ವರ್ಷದ ಶ್ರೀಶಾನ್ ಶೆಟ್ಟಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ಬಾಲಕನ ಸಾವಿನಲ್ಲಿ ಅನುಮಾನವಿದೆ ಎಂದು ಪೆರ್ಡೂರು ಗ್ರಾಮದ ಕುಕ್ಕುಂಜಾರು, ಅನಂತಪದ್ಮನಾಭ ನಿಲಯದ ಕರುಣಾಕರ ಶೆಟ್ಟಿ ಅವರು ಹಿರಿಯಡಕ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.

ಹಿರಿಯಡಕ ಸರ್ಕಾರಿ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶ್ರೀಶಾನ್, ನವೆಂಬರ್ 9ರಂದು ಮಧ್ಯಾಹ್ನ 12.15ಕ್ಕೆ ತಂದೆಯೊಂದಿಗೆ ಪೆರ್ಡೂರಿಗೆ ತೆರಳಿದ್ದ. ಬಳಿಕ ಅಜ್ಜಿ ಮನೆಯಾದ ಅಲಂಗಾರಿಗೆ ಹೋಗಿ, ಅಜ್ಜಿ ಮೊಬೈಲ್ನಿಂದ ತಂದೆಗೆ ಕರೆ ಮಾಡಿ ನದಿಗೆ ಆಟವಾಡಲು ಹೋಗುತ್ತೇನೆ ಎಂದು ತಿಳಿಸಿದ್ದ. ಆದರೆ ಮಧ್ಯಾಹ್ನ 3 ಗಂಟೆ ಆದರೂ ಮನೆಗೆ ಮರಳದ ಕಾರಣ, ಕುಟುಂಬಸ್ಥರು ಮತ್ತು ಸ್ಥಳೀಯರು ಸುತ್ತಮುತ್ತ ಎಲ್ಲೆಡೆ ಹುಡುಕಾಡಿದರೂ ಶ್ರೀಶಾನ್ ಪತ್ತೆಯಾಗಿರಲಿಲ್ಲ. ಯಾರಾದರೂ ಪುಸಲಾಯಿಸಿ, ಆಮಿಷವೊಡ್ಡಿ ಅಪಹರಣ ಮಾಡಿರಬಹುದೆಂಬ ಅನುಮಾನವನ್ನು ತಂದೆ ತಮ್ಮ ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ. ಜೊತೆಗೆ, ನವೀನ್ ಎಂಬ ಸ್ಥಳೀಯ ಯುವಕನ ಜೊತೆ ಮಗನು ಹೋಗಿದ್ದಿರಬಹುದೆಂದು ಅವರು ತಿಳಿಸಿದ್ದಾರೆ.

ಶ್ರೀಶಾನ್ನ ಮೃತದೇಹ ಮುಂದಿನ ದಿನ ಮಡಿಸಾಲು ಹೊಳೆಯಲ್ಲಿ ಪತ್ತೆಯಾಗಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನೆರವೇರಿಸಲಾಗಿದೆ. ಪ್ರಕರಣವನ್ನು ಆರಂಭದಲ್ಲಿ ಯುಡಿಆರ್ನಡಿ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿತ್ತು. ತಂದೆಯ ಹೊಸ ದೂರಿನ ಆಧಾರದ ಮೇಲೆ, ಪೊಲೀಸರು ನವೀನ್ ಎಂಬಾತನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಮಣಿಪಾಲ ಕೆಎಂಸಿಯಿಂದ ದೊರೆಯಬೇಕಿರುವ ಮರಣದ ಕಾರಣ ವರದಿ ಮತ್ತು ಎಫ್ಎಸ್ಎಲ್ ವರದಿ ಬಂದ ನಂತರ, ಹೆಚ್ಚಿನ ಸುಳಿವುಗಳು ದೊರೆತರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.



