ಉಡುಪಿ: ಚಲಿಸುತ್ತಿರುವಾಗ ಅಡ್ಡ ಬಂದ ಬೈಕಿಗೆ ಡಿಕ್ಕಿಯಾದುದನ್ನು ತಪ್ಪಿಸಲು ಹೋಗಿ ಲಾರಿಯೊಂದು ಮಗುಚಿಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆಯ ಆಶೀರ್ವಾದ ಸಮೀಪ ಭಾನುವಾರ ಮಧ್ಯಾಹ್ನ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸರಕು ಸಾಗಿಸುತ್ತಿದ್ದ ಲಾರಿಗೆ ಬೈಕೊಂದು ಅಡ್ಡ ಬಂದಿದೆ. ಅಪಘಾತ ತಪ್ಪಿಸಲು ಲಾರಿ ಚಾಲಕ ತಕ್ಷಣ ಬ್ರೇಕ್ ಹಾಕಿದ ಕಾರಣ ಲಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ.

ದುರ್ಘಟನೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಲಾರಿ ಚಾಲಕ, ನಾಲ್ಕು ಮಂದಿ ಕಾರ್ಮಿಕರು ಹಾಗೂ ಬೈಕ್ ಸವಾರನನ್ನು ತಮ್ಮ ವಾಹನದಲ್ಲಿಯೇ ಕರೆದೊಯ್ದು ಅಂಬಲಪಾಡಿ ಜಂಕ್ಷನ್ ಬಳಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದಿದ್ದಾರೆ. ಈ ದುರ್ಘಟನೆ ಸಂಭವಿಸುವ ಮುಂಚೆ ಅದೇ ಸ್ಥಳದಲ್ಲಿ ಬೈಕ್ ಸವಾರನೊಬ್ಬ ತನ್ನ ಬೈಕ್ ನಿಲ್ಲಿಸಿ ಪಕ್ಕದಲ್ಲಿ ನಿಂತಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾನೆ. ಆದರೆ ಈತನ ಬೈಕ್ ಮಾತ್ರ ಲಾರಿಯ ಅಡಿಗೆ ಬಿದ್ದು ನಜ್ಜುಗುಜ್ಜಾಗಿದೆ. ಪ್ರಕರಣದ ಬಗ್ಗೆ ಉಡುಪಿ ಸಂಚಾರಿ ಠಾಣೆಗೆ ಮಾಹಿತಿ ನೀಡಲಾಗಿದೆ.
